ಆದಿವಾಸಿ, ದಲಿತ ಪರ ಹೋರಾಟಗಾರ ಸಾಯಿಬಾಬಾ ಬಿಡುಗಡೆಗೆ ವಿಶ್ವಸಂಸ್ಥೆ ಆಗ್ರಹ
ಮಹಾರಾಷ್ಟ್ರ ಜೈಲಿನಲ್ಲಿರುವ ದಿಲ್ಲಿ ವಿವಿ ಉಪನ್ಯಾಸಕ

ಹೊಸದಿಲ್ಲಿ,ಎ.30: ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಮಹಾರಾಷ್ಟ್ರದ ಜೈಲಿನಲ್ಲಿ ಬಂಧಿಯಾಗಿರುವ ದಿಲ್ಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಜಿ.ಎನ್ ಸಾಯಿಬಾಬಾ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರ ತಂಡ ಭಾರತಕ್ಕೆ ಆಗ್ರಹಿಸಿದೆ.
ಸದ್ಯ ಗಾಲಿ ಕುರ್ಚಿಯ ಆಸರೆಯಲ್ಲಿರುವ ಸಾಯಿಬಾಬಾ ಅವರಿಗೆ ಮಾವೋವಾದಿಗಳ ಜೊತೆ ಸಂಪರ್ಕವಿದೆ ಎಂದು ಆರೋಪಿಸಿ 2014ರಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಪೊಲೀಸರು ಬಂಧಿಸಿದ್ದರು. 2017ರಲ್ಲಿ ಅವರಿಗೆ ಜೀವಾವಧಿ ವಿಧಿಸಲಾಗಿದ್ದು ಅಂದಿನಿಂದ ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ.
ಸಾಯಿಬಾಬಾ ಅವರನ್ನು ಒಂಟಿ ಬಂಧನದಲ್ಲಿಡಲಾಗಿದ್ದು ಅವರಿಗೆ ಗಂಭೀರ ಆರೋಗ್ಯ ಸಮಸ್ಯೆಯಿದೆ. ಹಾಗಾಗಿ ಅವರಿಗೆ ತಕ್ಷಣ ಮತ್ತು ಸಮರ್ಥ ವೈದ್ಯಕೀಯ ಚಿಕಿತ್ಸೆ ಒದಗಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಯಿಬಾಬಾ ಅವರನ್ನು ಅಸಹನೀಯ ಪರಿಸ್ಥಿತಿಯಲ್ಲಿ ಬಂಧಿಸಿಡಲಾಗಿದೆ. ಅವರನ್ನು ಕೂಡಿ ಹಾಕಿರುವ ಕೋಣೆಗೆ ಕಿಟಕಿಗಳಿಲ್ಲ, ಹೆಚ್ಚಿನ ಉಷ್ಣಾಂಶವಿದೆ ಮತ್ತು ಯಾರಿಗೂ ಪ್ರವೇಶವಿಲ್ಲ. ಅವರಿಗೆ 2014ರಲ್ಲಿ ಗಾಯಕ್ಕೆ ಸರಿಯಾದ ಚಿಕಿತ್ಸೆಯನ್ನೂ ನೀಡಲಾಗಿಲ್ಲ. ಇತ್ತೀಚಿನ ವರದಿಗಳ ಪ್ರಕಾರ ಅವರು ತೀವ್ರ ನೋವನುಭವಿಸುತ್ತಿದ್ದಾರೆ ಮತ್ತು ಔಷಧಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ದಲಿತರ ಹಕ್ಕುಗಳನ್ನು ರಕ್ಷಿಸುವ ಹೋರಾಟದಲ್ಲಿ ಡಾ. ಸಾಯಿಬಾಬಾ ಮುಂಚೂಣಿಯಲ್ಲಿದ್ದರು.
ಕಾರಾಗೃಹದಲ್ಲಿರುವ ವಿಕಲಚೇತನರಿಗೆ ಸೂಕ್ತ ಸೌಲಭ್ಯ, ಆರೋಗ್ಯಸೇವೆ ಮತ್ತು ನಿರಂತರ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿಯನ್ನು ಒದಗಿಸಬೇಕಾದ ಅಂತರ್ರಾಷ್ಟ್ರೀಯ ನಿಬಂಧನೆಗೆ ಭಾರತ ಒಳಪಟ್ಟಿದೆ ಎಂದು ಮಾನವ ಹಕ್ಕುಗಳ ತಜ್ಞರು ತಿಳಿಸಿದ್ದಾರೆ.