ಮೋದಿಯಿಂದ ನಾಚಿಕೆಯಿಲ್ಲದೆ ಕುದುರೆ ವ್ಯಾಪಾರ: ಮಮತಾ ಬ್ಯಾನರ್ಜಿ

ಕೋಲ್ಕತಾ,ಎ.30: ಪ್ರಧಾನಿ ನರೇಂದ್ರ ಮೋದಿ ನಾಚಿಕೆಯಿಲ್ಲದೆ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ನ 40 ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ ಎಂಬ ಮೋದಿಯ ಹೇಳಿಕೆಯ ಹಿನ್ನೆಲೆಯಲ್ಲಿ ಬ್ಯಾನರ್ಜಿ ಈ ರೀತಿ ಗುಡುಗಿದ್ದಾರೆ.
“ಟಿಎಂಸಿಯ 40 ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮೋದಿ ಹೇಳಿಕೊಂಡಿದ್ದಾರೆ. ನೋಡಿ ಅವರು ಎಷ್ಟು ನಿರ್ಲಜ್ಜವಾಗಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸುವುದರ ಮೇಲೆ ಕೂಡಲೇ ನಿಷೇಧ ಹೇರಬೇಕು. ಮೋದಿಗೆ ಪ್ರಧಾನಿಯಾಗಿ ಮುಂದುವರಿಯುವ ಯಾವ ಹಕ್ಕೂ ಇಲ್ಲ” ಎಂದು ಬ್ಯಾನರ್ಜಿ ಕಿಡಿಕಾರಿದ್ದಾರೆ.
ಮೋದಿ ಕಳೆದ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ? ರೈತರು ಆತ್ಮಹತ್ಯೆಮಾಡಿಕೊಳ್ಳುತ್ತಿದ್ದಾರೆ, ನಿರುದ್ಯೋಗ ಏರುಗತಿಯಲ್ಲಿದೆ. ಬಿಜೆಪಿ ಎಷ್ಟೇ ಹಗಲಗನಸು ಕಂಡರೂ ಪಶ್ಚಿಮ ಬಂಗಾಲದಲ್ಲಿ ಅದು ನೆಲೆ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.