ಸಹ್ಯಾದ್ರಿಯಲ್ಲಿ ‘ಟೆಕ್-ವಿಷನ್- ಎಲವೇಟ್ 50’ ಸ್ಪರ್ಧೆ

ಮಂಗಳೂರು, ಮೇ 1: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಕ್ಯಾಂಪಸ್ನಲ್ಲಿ ಒಂದು ದಿನದ ‘ಟೆಕ್-ವಿಷನ್- ಎಲವೇಟ್ 50’ ಸ್ಪರ್ಧೆ ನಡೆಯಿತು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಯಿತು.
‘ಟೆಕ್-ವಿಷನ್- ಎಲವೇಟ್ 50’ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸರಕಾರದ ಇನ್ಸ್ಟಿಟ್ಯೂಟ್ ಆ್ಯಂಡ್ ಐಟಿ-ಬಿಟಿ ಇಲಾಖೆಯ ಕೌಶಲ್ಯ ಕಾರ್ಯಕ್ರಮದ ಮುಖ್ಯಸ್ಥೆ ಡಾ.ಸಂಧ್ಯಾ ಆರ್. ಅನ್ವೆಕರ್, ಅತ್ಯುತ್ತಮ ಆಲೋಚನೆಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಅವುಗಳನ್ನು ಪ್ರದರ್ಶಿಸಲು ವೇದಿಕೆಯ ಅಗತ್ಯವಿದೆ. ಅಂತಹ ವೇದಿಕೆಯನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಕಲ್ಪಿಸಿದೆ ಎಂದು ಹೇಳಿದರು.
ವಿಶಿಷ್ಟ ಆಲೋಚನೆಗಳನ್ನು ಹೊತ್ತು ತಂದ ವಿದ್ಯಾರ್ಥಿಗಳು ಅವುಗಳನ್ನು ಪ್ರಯೋಗಿಸಿ ಉತ್ಪನ್ನಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಬಹುದು. ಸೃಜನಶೀಲ ವಿಚಾರಗಳಿಗೆ ಎಂದಿಗೂ ತಡೆಯೊಡ್ಡಬೇಡಿ. ಅವುಗಳಿಗೆ ನೀರೆರೆದು, ಪೋಷಿಸಿ ಫಲವನ್ನು ನಿಮ್ಮದಾಗಿಸಿಕೊಳ್ಳಬೇಕು. ಈ ಮೂಲಕ ನಿಮ್ಮ ಪೋಷಕರ ಕನಸನ್ನೂ ಈಡೇರಿಸಿಬೇಕು ಎಂದು ಸಲಹೆ ನೀಡಿದರು.
ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಸಹ್ಯಾದ್ರಿ ಪ್ರಾಜೆಕ್ಟ್ ಸಪೋರ್ಟ್ ಸ್ಕೀಮ್ (ಎಸ್ಪಿಎಸ್ಎಸ್)ಗೆ 20 ಲಕ್ಷ ರೂ.ನ್ನು ಫಂಡ್ ಮಾಡಲಾಗಿದೆ. ಇದರಲ್ಲಿ ಪ್ರತಿಯೊಂದು ಅರ್ಹ ವಿದ್ಯಾರ್ಥಿಗಳಿಗೆ ಯೋಜನೆಗಳ ಮೂಲಕ ಅನುದಾನ ನೀಲಾಗುತ್ತದೆ ಎಂದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಅಭಿವೃದ್ಧಿಗೆ ಪ್ರಾಡಕ್ಟ್ ಆಧರಿತ ಸ್ಟಾರ್ಟಪ್ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗುತ್ತಿದ್ದಾರೆ. ಪ್ರತಿಯೊಂದು ವಿಭಾಗವು 10 ಯೋಜನೆಗಳನ್ನು ಆಯ್ಕೆ ಮಾಡುತ್ತದೆ. ಐದು ಇಲಾಖೆಗಳಿಂದ 50 ಯೋಜನೆಗಳಿವೆ. ಅಂತಿಮವಾಗಿ 50 ಎಲಿವೆಟ್ ತಂಡಗಳು ಆಯ್ಕೆಯಾಗಿವೆ. ಇದರಲ್ಲಿ 50ರ ಪೈಕಿ 20 ತಂಡಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ತಂಡಕ್ಕೆ ಒಂದು ಲಕ್ಷ ರೂ. ಯೋಜನೆಯ ಅನುದಾನ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಚ್ಆರ್ಡಿ ಉನ್ನತ ಶಿಕ್ಷಣದ ಎಐಸಿಟಿಇನ ಉಪನಿರ್ದೇಶಕ ಡಾ.ಮಧುಕರ್ ಎಂ. ವಾವಾರೆ, ಸ್ಟಾರ್ಟ್ಅಪ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಕರ್ನಾಟಕ ಇದರ ಉದಯ್ ಬಿರ್ಜೆ, ಎ.ಸೂರ್ಯನಾರಾಯಣನ್, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸ್ ರಾವ್ ಕುಂಟೆ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ‘ಟೆಕ್-ವಿಷನ್ನ ರತೀಶ್ಚಂದ್ರ ಗಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸ್ ರಾವ್ ಕುಂಟೆ ವಂದಿಸಿದರು.







