ಪ್ರಧಾನಿ ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಬಿದ್ದ ಹಣ ಕ್ಷಣದಲ್ಲಿ ಮಾಯ!

ಹೊಸದಿಲ್ಲಿ,ಮೇ.2: ಮೋದಿ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ ಪಿಎಂ ಕಿಸಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ಬಿದ್ದ ಕೋಟ್ಯಂತರ ರೂ. ಹಣ ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗುತ್ತಿದೆ ಎಂಬ ನಿಜಾಂಶ ಆನ್ಲೈನ್ ಸುದ್ದಿ ಜಾಲತಾಣ ದಿ ವೈರ್, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಯಿಂದ ಬಯಲಾಗಿದೆ.
ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸರಕಾರದ ಅತ್ಯಂತ ಯಶಸ್ವಿ ಯೋಜನೆಯಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಫೆಬ್ರವರಿ 24ರಂದು ಚಾಲನೆ ನೀಡಲಾದ ಈ ಯೋಜನೆ ರೈತರ ಸ್ಥಿತಿಯನ್ನು ಸುಧಾರಿಸುವಲ್ಲಿ ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದರು.
ಈ ಯೋಜನೆಯಡಿ ರೈತರ ಖಾತೆಗೆ ತಲಾ 2,000 ರೂ.ಗಳ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ಹಾಕಲಾಗುತ್ತದೆ. ಆದರೆ 'ದಿ ವೈರ್'ಗೆ ದೊರೆತ ಮಾಹಿತಿ ಪ್ರಕಾರ, ಈ ಯೋಜನೆಯ ಮೊದಲ ಕಂತಿನ ರೂಪದಲ್ಲಿ ರೈತರ ಬ್ಯಾಂಕ್ ಖಾತೆಗೆ ಹಾಕಲಾದ 2,000 ರೂ. ಕೆಲವೇ ಗಂಟೆಗಳು ಅಥವಾ ಕೆಲವೇ ದಿನಗಳಲ್ಲಿ ಹಿಂಪಡೆದುಕೊಳ್ಳಲಾಗಿದೆ.
ಮಾಹಿತಿ ಹಕ್ಕಿನಲ್ಲಿ ಪ್ರತಿಕ್ರಿಯೆ ನೀಡಿದ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸೇರಿ 19 ರಾಷ್ಟ್ರೀಯ ಬ್ಯಾಂಕ್ಗಳು, ಈ ಯೋಜನೆಯಡಿ ಅನೇಕ ಫಲಾನುಭವಿಗಳ ಖಾತೆಗೆ ಬಿದ್ದ ಹಣವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿವೆ.
ಸ್ಟೇಟ್ ಬ್ಯಾಂಕ್ ಇಂಡಿಯಾ ನೀಡಿದ ಹೇಳಿಕೆಯಲ್ಲಿ, 2019ರ ಮಾರ್ಚ್8ವರೆಗೆ ಈ ರೀತಿ 27,307 ಖಾತೆಗಳಿಗೆ 5.46 ಕೋಟಿ.ರೂ ಜಮೆ ಮಾಡಲಾಗಿದ್ದು ನಂತರ ಹಿಂಪಡೆದುಕೊಳ್ಳಲಾಗಿದೆ. ಈ ಅವಧಿಯಲ್ಲಿ ಎಸ್ಬಿಐ ಪಿಎಂ ಕಿಸಾನ್ ಯೋಜನೆಯಡಿ 42,74,000 ಖಾತೆಗಳಿಗೆ 854.85 ಕೋ.ರೂ. ಜಮೆ ಮಾಡಿದೆ ಎಂದು ತಿಳಿಸಿದೆ.
ರೈತರ ಖಾತೆಯಿಂದ ಹಣ ಹಿಂಪಡೆದುಕೊಳ್ಳುವಿಕೆ ಬಗ್ಗೆ ಕೇಂದ್ರ ಕೃಷಿ ಸಚಿವಾಲಯಕ್ಕೆ ಯಾವುದೇ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಸಚಿವಾಲಯದ ರೈತರ ಕಲ್ಯಾಣ ಇಲಾಖೆಗೆ ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ, ಇಂತಹ ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳುವುದು ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ ಮತ್ತು ಇಲಾಖೆಗೆ ಈವರೆಗೆ ಇಂತಹ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಿದೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಸುಮಾರು 3,00,27,429 ರೈತರ ಖಾತೆಗಳಿಗೆ 60,05,48,58,000ರೂ. ಜಮೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ತಮ್ಮ ಖಾತೆಗೆ ಜಮೆ ಮಾಡಲಾದ 2,000ರೂ. ಅನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆದುಕೊಳ್ಳಲಾಗಿದೆ ಎಂದು ಅನೇಕ ರೈತರು ಆರೋಪಿಸುತ್ತಿದ್ದಾರೆ ಎಂದು ಫೆಬ್ರವರಿಯಲ್ಲಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.