ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನದ ಆರೋಪ: ಮೂವರು ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಕಣ್ಣೂರು, ಮೇ 2: ಎಪ್ರಿಲ್ 23ರಂದು ನಡೆದ ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಕಲಿ ಮತ ಚಲಾಯಿಸಿದ ಆರೋಪದಲ್ಲಿ ಪಂಚಾಯತ್ ಸದಸ್ಯೆ ಸಹಿತ ಸಿಪಿಎಂನ ಮೂವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಸಲ್ಲಿಸಿದ ದೂರಿನ ಆಧಾರದಲ್ಲಿ ಚೆರುತಾಯ ಪಂಚಾಯತ್ನ ಸದಸ್ಯೆ ಎನ್.ಪಿ. ಸಲೀನಾ, ಕೆ.ಪಿ. ಸುಮಯ್ಯೆ ಹಾಗೂ ಪದ್ಮಿನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಒಂದು ಭಾಗವಾದ ಕಣ್ಣೂರು ಜಿಲ್ಲೆಯ ಪಿಲಾತರ ಎಯುಪಿ ಶಾಲೆಯ ಮತಗಟ್ಟೆ 17 ಹಾಗೂ 19ರಲ್ಲಿ ಮೂವರು ಮಹಿಳೆಯರು ಎರಡಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸುತ್ತಿರುವ ಸಿಸಿಟಿವಿ ದೃಶ್ಯವನ್ನು ಸ್ಥಳೀಯ ಟಿ.ವಿ. ವಾಹಿನಿಯೊಂದು ಪ್ರಸಾರ ಮಾಡಿದೆ. ಮೂವರು ಮಹಿಳೆಯರು ನಕಲಿ ಮತದಾನ ಮಾಡಿರುವುದನ್ನು ಅನಂತರ ಮುಖ್ಯ ಚುನಾವಣಾ ಅಧಿಕಾರಿ ಟಿಕಾ ರಾಮ್ ಮೀನಾ ದೃಢಪಡಿಸಿದ್ದಾರೆ. ಈ ನಕಲಿ ಮತದಾನದಲ್ಲಿ ಚುನಾವಣಾ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರತಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಈ ಕ್ಷೇತ್ರಗಳ ಕಾರ್ಯಕರ್ತರು ಸಲ್ಲಿಸಿದ ನಕಲಿ ಮತದಾನದ ಬಗೆಗಿನ ದೂರಿನ ಆಧಾರದಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಕಣ್ಣೂರು ಹಾಗೂ ಕಾಸರಗೋಡು ಜಿಲ್ಲಾಧಿಕಾರಿಗಳಿಂದ ವರದಿ ಕೋರಿದ್ದಾರೆ. ಈ ನಡುವೆ ಕಾಸರಗೋಡಿನ ಮತಗಟ್ಟೆಯೊಂದರಲ್ಲಿ ಐಯುಎಂಎಲ್ನ ಶಂಕಿತ ಇಬ್ಬರು ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಸಿಪಿಎಂ ನೇತೃತ್ವದ ಎಲ್ಡಿಎಫ್ ನೀಡಿದ ದೂರಿನ ಆಧಾರದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಜಿಲ್ಲಾಧಿಕಾರಿಯಿಂದ ವರದಿ ಕೋರಿದ್ದಾರೆ. ನಕಲಿ ಮತದಾನದ ಆರೋಪವನ್ನು ಸಿಪಿಎಂನ ರಾಜ್ಯ ನಾಯಕತ್ವ ನಿರಾಕರಿಸಿದೆ ಹಾಗೂ ಯುಡಿಎಫ್ನ ಷಡ್ಯಂತ್ರಕ್ಕೆ ಅನುಗುಣವಾಗಿ ಮುಖ್ಯ ಚುನಾವಣಾ ಅಧಿಕಾರಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಎಂನ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್, ನಕಲಿ ಮತದಾನ ಆರೋಪಕ್ಕೆ ಸಂಬಂಧಿಸಿ ಯಾವುದೇ ತನಿಖೆ ಎದುರಿಸಲು ಪಕ್ಷ ಸಿದ್ಧವಾಗಿದೆ ಎಂದಿದ್ದಾರೆ.