ಯುಪಿಎ ಆಡಳಿತಾವಧಿಯ 6 ಸರ್ಜಿಕಲ್ ದಾಳಿಗಳ ಮಾಹಿತಿ ಬಿಡುಗಡೆಗೊಳಿಸಿದ ಕಾಂಗ್ರೆಸ್
ಬಿಜೆಪಿ ಟೀಕೆಗೆ ದಾಖಲೆ ಸಹಿತ ತಿರುಗೇಟು

ಹೊಸದಿಲ್ಲಿ, ಮೇ 3: ಯುಪಿಎ ಆಡಳಿತಾವಧಿಯಲ್ಲಿ ನಡೆಸಲಾದ ಆರು ಉಗ್ರ ನಿಗ್ರಹ ಸರ್ಜಿಕಲ್ ದಾಳಿಗಳ ಪಟ್ಟಿಯನ್ನು ಕಾಂಗ್ರೆಸ್ ಗುರುವಾರ ಹೊರತಂದಿದ್ದು, ಪಕ್ಷ ಯಾವತ್ತೂ ಮಿಲಿಟರಿ ಕಾರ್ಯಾಚರಣೆಗಳ ಲಾಭ ಪಡೆದಿಲ್ಲ ಎಂಬುದನ್ನು ಒತ್ತಿ ಹೇಳಿದೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆಸಲಾದ ಸರ್ಜಿಕಲ್ ದಾಳಿಗಳು ಕಣ್ಣಿಗೆ ಕಾಣುತ್ತಿಲ್ಲ ಹಾಗೂ ಯಾರಿಗೂ ತಿಳಿದಿಲ್ಲ ಎಂದು ಕೇಂದ್ರ ವಿತ್ತ ಸಚಿವ ಹಾಗೂ ಬಿಜೆಪಿ ನಾಯಕ ಅರುಣ್ ಜೇಟ್ಲಿ ವ್ಯಂಗ್ಯವಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಜಿಕಲ್ ದಾಳಿಗಳ ಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದೆ.
ಸರ್ಜಿಕಲ್ ದಾಳಿಗಳ ವಿವರ ಇಂತಿವೆ - ಪೂಂಚ್ ನಲ್ಲಿನ ಭಟ್ಟಲ್ ಸೆಕ್ಟರ್ (ಜೂನ್ 19, 2008), ನೀಲಂ ನದಿ ಕಣಿವೆ, ಖೇಲ್ ಸಮೀಪ ಶಾರ್ದ ಸೆಕ್ಟರ್ (ಆಗಸ್ಟ್ 30-ಸೆಪ್ಟೆಂಬರ್ 1, 2011), ಸಾವನ್ ಪತ್ರ ಚೆಕ್ ಪೋಸ್ಟ್ (ಜನವರಿ 6, 2013), ನಝಾಪಿರ್ ಸೆಕ್ಟರ್ (ಜುಲೈ 27-28, 2013), ನೀಲಂ ಕಣಿವೆ (ಆಗಸ್ಟ್ 6, 2013) ಹಾಗೂ ಇನ್ನೊಂದು ಸರ್ಜಿಕಲ್ ದಾಳಿ ಡಿಸೆಂಬರ್ 23, 2013ರಂದು ನಡೆದಿದೆ ಎಂದು ಕಾಂಗ್ರೆಸ್ ವಕ್ತಾರ ರಾಜೀವ್ ಶುಕ್ಲಾ ಹೇಳಿದ್ದಾರೆ.
ಯುಪಿಎಗಿಂತ ಹಿಂದೆ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ನಡೆಸಿದ್ದ ಎರಡು ಸರ್ಜಿಕಲ್ ದಾಳಿಗಳ ವಿವರಗಳನ್ನೂ ನೀಡಲಾಗಿದೆ. ನೀಲಂ ನದಿಗೆ ಅಡ್ಡಲಾಗಿರುವ ನಡಲ ಎಂಕ್ಲೇವ್ ಎಂಬಲ್ಲಿ ಜನವರಿ 21, 2000 ಹಾಗೂ ಪೂಂಚ್ ನ ಬರೋಹ್ ಸೆಕ್ಟರ್ ನಲ್ಲಿ ಸೆಪ್ಟೆಂಬರ್ 18, 2003ರಂದು ಸರ್ಜಿಕಲ್ ದಾಳಿ ನಡೆದಿದ್ದವು ಎಂದು ಶುಕ್ಲಾ ಹೇಳಿದ್ದಾರೆ.
ಯುಪಿಎ ಸರಕಾರದ ಅವಧಿಯಲ್ಲಿ ಹಲವಾರು ಸರ್ಜಿಕಲ್ ದಾಳಿಗಳು ನಡೆದಿದ್ದರೂ ಅವುಗಳನ್ನು ಪಕ್ಷ ಯಾವತ್ತೂ ರಾಜಕೀಯ ಲಾಭಕ್ಕಾಗಿ ಬಳಸಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಬಿಜೆಪಿಯ ಟೀಕೆಗೆ ಕಾರಣವಾದ ನಂತರ ಸರ್ಜಿಕಲ್ ದಾಳಿ ಮಾಹಿತಿ ಬಿಡುಗಡೆಗೊಳಿಸಲಾಗಿದೆ.
ಆದರೆ ಮನಮೋಹನ್ ಸಿಂಗ್ ಯಾ ವಾಜಪೇಯಿ ಯಾವತ್ತೂ ಸರ್ಜಿಕಲ್ ದಾಳಿಗಳ ಬಗ್ಗೆ ಮಾತನಾಡಿಲ್ಲ. ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ಹೇಳಿಕೊಳ್ಳುವ ಸಂಪ್ರದಾಯವಿಲ್ಲ, ಆದರೆ ಈ ಸರಕಾರ ಎಲ್ಲಾ ಸಂಪ್ರದಾಯಗಳನ್ನು ಮುರಿದಿದೆ ಎಂದು ಶುಕ್ಲಾ ಆರೋಪಿಸಿದ್ದಾರೆ.