ಒಡಿಶಾಕ್ಕೆ ಅಪ್ಪಳಿಸಿದ ಚಂಡಮಾರುತ: ಉರುಳಿದ ಮರಗಳು, ಮೂವರು ಬಲಿ

ಪುರಿ (ಒಡಿಶಾ), ಮೇ 3: ಫನಿ ಚಂಡಮಾರುತ ಶುಕ್ರವಾರ ಬೆಳಗ್ಗೆ ಒಡಿಶಾ ಕರಾವಳಿಯಲ್ಲಿ ಭಾರೀ ಅವಾಂತರ ಸೃಷ್ಟಿಸಿದ್ದು, ಚಂಡ ಮಾರುತದಿಂದ ಸಂಭವಿಸಿದ ವಿವಿಧ ದುರ್ಘಟನೆಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಂಡಮಾರುತದಿಂದ ಪುರಿ, ನಯಾಗಢ ಹಾಗೂ ಕೇಂದ್ರಪಾರ ಜಿಲ್ಲೆಗಳಲ್ಲಿ ಸಂಭವಿಸಿದ ಅವಘಡಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತ ಬಿ.ಪಿ. ಸೇಥಿ ತಿಳಿಸಿದ್ದಾರೆ. ಪುರಿಯಲ್ಲಿ ಧರೆಗುರುಳಿದ ಮರವೊಂದರ ಅಡಿಯಲ್ಲಿ ಸಿಲುಕಿ ಬಾಲಕನೋರ್ವ ಮೃತಪಟ್ಟಿದ್ದಾನೆ. ನಯಾಗಢದಲ್ಲಿ ಕಾಂಕ್ರಿಟ್ ನಿರ್ಮಾಣವೊಂದರಿಂದ ಹಾರಿದ ಅವಶೇಷವೊಂದು ಅಪ್ಪಳಿಸಿ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ. ಕೇಂದ್ರಪಾರ ಜಿಲ್ಲೆಯ ಪರಿಹಾರ ಕೇಂದ್ರವೊಂದರಲ್ಲಿ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ರಾಜಧಾನಿ ಭುವನೇಶ್ವರದ ವಿವಿಧ ಭಾಗಗಳಲ್ಲಿ ಹಾಗೂ ಇತರ ಹಲವು ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಗೋಪುರಗಳು ಹಾನಿಗೀಡಾಗಿವೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಚಂಡಮಾರುತದ ಕೇಂದ್ರ ಬಿಂದು 28 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಗಂಟೆಗೆ 30 ಕಿ.ಮೀ. ವೇಗದಲ್ಲಿ ಸಾಗುತ್ತಿದೆ ಎಂದು ಭುವನೇಶ್ವರದ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಎಚ್.ಆರ್. ಬಿಸ್ವಾಸ್ ತಿಳಿಸಿದ್ದಾರೆ. ಕೋಲ್ಕತ್ತಾ ಹಾಗೂ ಇತರ ಹಲವು ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಮಳೆ ಸುರಿದಿದೆ. ಇದರಿಂದ ರಾಜ್ಯ ರಾಜಧಾನಿಯ ಹಲವು ಪ್ರದೇಶಗಳು ಜಲಾವೃತವಾಗಿವೆ.
ಚಂಡಮಾರುತ ಸಂತ್ರಸ್ತರ ಶಿಬಿರಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ 880 ಚಂಡಮಾರುತ ಸಂತ್ರಸ್ತರ ಶಿಬಿರಗಳೂ ಸೇರಿದಂತೆ 4,000 ಚಂಡಮಾರುತ ಸಂತ್ರಸ್ತರ ಶಿಬಿರಗಳನ್ನು ಆರಂಭಿಸಲಾಗಿದೆ. 1 ಲಕ್ಷ ಒಣ ಆಹಾರ ಪ್ಯಾಕೇಟ್ಗಳನ್ನು ಸಿದ್ಧಪಡಿಸಲಾಗಿದೆ. ಅದನ್ನು ಪೂರೈಸಲು ಎರಡು ಹೆಲಿಕಾಪ್ಟರ್ಗಳಿಗೆ ಮನವಿ ಮಾಡಲಾಗಿದೆ. ಚಂಡಮಾರುತ ಪಶ್ಚಿಮಬಂಗಾಳಕ್ಕೆ ಪ್ರವೇಶಿಸುವ ಮುನ್ನ ಖುದ್ರಾ, ಕತಕ್, ಕೇಂದ್ರಪಾರ, ಜಗತ್ಸಿಂಗ್ಪುರ, ಜಜ್ಪುರ, ಭದ್ರಾಕ್ ಹಾಗೂ ಬಾಲಸೂರ್ ಮೂಲಕ ಹಾದು ಹೋಗಲಿದೆ. ಈ ಪ್ರದೇಶಗಳಲ್ಲಿ ಶನಿವಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಬಿಸ್ವಾಸ್ ತಿಳಿಸಿದ್ದಾರೆ. ಭಾರೀ ಗಾಳಿ ಹಾಗೂ ಮಳೆಗೆ ಪುರಿ ಪಟ್ಟಣದ ಹಲವು ಭಾಗಗಳಲ್ಲಿ ಹಾಗೂ ಪುರಿ-ಕೊನಾರ್ಕ್ನ ಸಮುದ್ರ ತೀರದಲ್ಲಿ ಮರಗಳು ಧರಾಶಾಹಿಯಾಗಿವೆ. ಗಂಜಾಮ್ ಹಾಗೂ ಗಜಪತಿ ಜಿಲ್ಲೆಗಳಲ್ಲಿ ಕೂಡ ಹಲವು ಮರಗಳು ಧರೆಗುರುಳಿವೆ. ಪುರಿ ಜಿಲ್ಲೆಯಲ್ಲಿರುವ ಒಂದು ನಿರಾಶ್ರಿತರ ಶಿಬಿರಕ್ಕೆ 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜ್ಯೋತಿ ಪ್ರಕಾಶ್ ದಾಸ್ ತಿಳಿಸಿದ್ದಾರೆ.
ಕೇಂದ್ರದಿಂದ 1000 ಕೋಟಿ ರೂ. ಬಿಡುಗಡೆ
ಚಂಡಮಾರುತ ಅಪ್ಪಳಿಸಿದ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕನಿಷ್ಠ 100 ಕೋಟಿ ರೂಪಾಯಿ ಮುಂಗಡವಾಗಿ ಬಿಡುಗಡೆ ಮಾಡಿದ್ದಾರೆ. ರಾಜಸ್ಥಾನದ ಕರೌಲಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚಂಡಮಾರುತ ಪೀಡಿತ ಒಡಿಶಾ, ಪಶ್ಚಿಮಬಂಗಾಳ ಹಾಗೂ ಆಂಧ್ರಪ್ರದೇಶ ರಾಜ್ಯಗಳೊಂದಿಗೆ ಪೂರ್ಣ ದೇಶ ಹಾಗೂ ಸರಕಾರ ಇದೆ ಎಂದರು.
ಭಾರತೀಯ ರೈಲ್ವೆಯಿಂದ ಉಚಿತ ಸೇವೆ
ಫನಿ ಚಂಡಮಾರುತ ಸಂತ್ರಸ್ತ ರಾಜ್ಯಗಳಾದ ಪಶ್ಚಿಮಬಂಗಾಳ, ಒಡಿಶಾ ಹಾಗೂ ಆಂಧ್ರಪ್ರದೇಶಗಳಿಗೆ ಸರಕು ಸಾಗಾಟ ಹಾಗೂ ಪ್ರಯಾಣಿಕರ ರೈಲುಗಳಲ್ಲಿ ನೆರವು ಹಾಗೂ ಪರಿಹಾರ ಸಾಮಗ್ರಿಗಳನ್ನು ಅಂತರ್ ರಾಜ್ಯ ಹಾಗೂ ರಾಜ್ಯದ ಒಳಗಡೆ ಉಚಿತ ಸಾಗಾಟ ಸೇವೆಗೆ ಅನುಮತಿ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.
43 ವರ್ಷಗಳಲ್ಲೇ ಅತಿ ಪ್ರಬಲ ಚಂಡಮಾರುತ
ಒಡಿಶಾ ಕರಾವಳಿಗೆ 30 ಗಂಟೆಗಳ ಕಾಲ ಅಪ್ಪಳಿಸಿದ ಹಾಗೂ 10 ಸಾವಿರ ಜನರ ಸಾವಿಗೆ ಕಾರಣವಾದ 1999ರ ಸೂಪರ್ ಚಂಡ ಮಾರುತದ ಬಳಿಕ ಅತಿ ಪ್ರಬಲ ಚಂಡಮಾರುತ ಈಗ ಅಪ್ಪಳಿಸಿದ ಫನಿ. ಭಾರತದ ಸಮೀಪದ ಸಾಗರದಲ್ಲಿ ಎಪ್ರಿಲ್ನಲ್ಲಿ ಇಷ್ಟು ತೀವ್ರತೆಯ ಚಂಡಮಾರುತ ಅಪ್ಪಳಿಸುತ್ತಿರುವುದು 43 ವರ್ಷಗಳಲ್ಲಿ ಇದೇ ಮೊದಲು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಫನಿ-ಫೋನಿ
ಫನಿಯನ್ನು ಫೋನಿ ಎಂದು ಉಚ್ಚರಿಸಲಾಗುತ್ತಿದೆ. ಹೀಗೆ ಉಚ್ಚರಿಸುವಂತೆ ಸಲಹೆ ನೀಡಿರುವುದು ಬಾಂಗ್ಲಾದೇಶ. ಈ ಪದವನ್ನು ಭಾಷಾಂತರ ಮಾಡಿದರೆ ಹಾವಿನ ಹೆಡೆ ಅನ್ನುವ ಅರ್ಥ ನೀಡುತ್ತದೆ.