ಚಂಡಮಾರುತ ಒಡಿಶಾಕ್ಕೆ ಅಪ್ಪಳಿಸಿದ ಬೆನ್ನಲ್ಲೇ ಜನಿಸಿದ ಮಗುವಿಗೆ ‘ಫನಿ’ ನಾಮಕರಣ

ಭುವನೇಶ್ವರ,ಮೇ 3: ಶುಕ್ರವಾರ ಬೆಳಿಗ್ಗೆ ಒಡಿಶಾ ಕರಾವಳಿಗೆ ಫನಿ ಚಂಡಮಾರುತ ಅಪ್ಪಳಿಸಿದ ಬೆನ್ನಿಗೇ ಭುವನೇಶ್ವರದಲ್ಲಿ ಜನಿಸಿದ ಮಗುವಿಗೆ ಅದೇ ಹೆಸರನ್ನಿಡಲಾಗಿದೆ. ಬೆಳಿಗ್ಗೆ 11:03ಕ್ಕೆ ರೈಲ್ವೆ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ 32ರ ಹರೆಯದ ಮಹಿಳೆ ಚಂಡಮಾರುತದ ನೆನಿಪಿಗಾಗಿ ‘ಫನಿ’ ಎಂದು ನಾಮಕರಣ ಮಾಡಲು ನಿರ್ಧರಿಸಿದರು.
ರೈಲ್ವೆ ಉದ್ಯೋಗಿಯಾಗಿರುವ ಮಹಿಳೆ ಮಂಚೇಶ್ವರದ ಬೋಗಿ ದುರಸ್ತಿ ಕಾರ್ಯಾಗಾರದಲ್ಲಿ ಸಹಾಯಕಿಯಾಗಿದ್ದಾರೆ. ತಾಯಿ ಮತ್ತು ಮಗು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದರು.
ಈ ಹಿಂದೆ ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನಿಸಿದ್ದ ಹಲವಾರು ಮಕ್ಕಳು ಅವೇ ಹೆಸರುಗಳನ್ನು ಪಡೆದುಕೊಂಡಿವೆ. ಕಳೆದ ವರ್ಷ ತಿತ್ಲಿ ಚಂಡಮಾರುತ ಒಡಿಶಾದಲ್ಲಿ ಹಾವಳಿಯೆಬ್ಬಿಸಿದ್ದಾಗ ಹಲವಾರು ಪೋಷಕರು ತಮ್ಮ ನವಜಾತ ಪುತ್ರಿಯರಿಗೆ ‘ತಿತ್ಲಿ’ ಎಂದು ನಾಮಕರಣ ಮಾಡಿದ್ದರು.
ಅಬ್ಬರಿಸಿದ ಫನಿ: ಫನಿ ಚಂಡಮಾರುತ ಶುಕ್ರವಾರ ಬೆಳಿಗ್ಗೆ ಪುರಿ ಸಮೀಪ ಕರಾವಳಿಯನ್ನು ಅಪ್ಪಳಿಸಿದ್ದು,ಮೂವರನ್ನು ಬಲಿ ತೆಗೆದುಕೊಂಡಿದೆ. ಭಾರೀ ಬಿರುಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು,ರಾಜ್ಯದ ಹಲವಾರು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.
ಕರಾವಳಿ ಪ್ರದೇಶವು ಭಾರೀ ಮಳೆಯಿಂದ ತತ್ತರಿಸಿದ್ದು,ಪ್ರಸಿದ್ಧ ಯಾತ್ರಾಸ್ಥಳ ಪುರಿ ಮತ್ತು ಇತರ ಪ್ರದೇಶಗಳು ನೀರಿನಲ್ಲಿ ಮುಳುಗಿವೆ.
ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತವಾಗಿರುವ ಫನಿ ಕ್ರಮೇಣ ದುರ್ಬಲಗೊಳ್ಳುತ್ತಿದ್ದು, ಪಶ್ಚಿಮ ಬಂಗಾಳದತ್ತ ಚಲಿಸುತ್ತಿದೆ.
ಒಡಿಶಾ ಸರಕಾರವು ಕನಿಷ್ಠ 600 ಗರ್ಭಿಣಿಯರು ಸೇರಿದಂತೆ 11 ಲಕ್ಷಕ್ಕೂ ಅಧಿಕ ಜನರನ್ನು ಎತ್ತರದ ಪ್ರದೇಶಗಳಲ್ಲಿ ಸ್ಥಾಪಿಸಿರುವ ಶಿಬಿರಗಳಿಗೆ ಸ್ಥಳಾಂತರಿಸಿದೆ.
ಅತ್ತ ಶುಕ್ರವಾರ ರಾಜಸ್ಥಾನದಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,ರಾಷ್ಟ್ರ ಮತ್ತು ಕೇಂದ್ರ ಪೀಡಿತ ಜನರೊಂದಿಗೆ ಇವೆಯೆಂದು ತಾನು ಭರವಸೆ ನೀಡುತ್ತೇನೆ ಎಂದು ಹೇಳಿದರು. ಫನಿ ಚಂಡಮಾರುತದಿಂದ ಬಾಧಿತ ರಾಜ್ಯಗಳಿಗೆ ಮುಂಚಿತವಾಗಿಯೇ 1,000 ಕೋ.ರೂ.ಗಳ ಆರ್ಥಿಕ ನೆರವನ್ನು ಬಿಡುಗಡೆಗೊಳಿಸಲಾಗಿದೆ ಎಂದರು.