‘ರೈತರ ಹೊಲಗಳ ರಕ್ಷಣೆಯೂ ರಾಷ್ಟ್ರವಾದವೇ’: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಸಲಹೆ

ರಾಯಬರೇಲಿ(ಉ.ಪ್ರ),ಮೇ 3: ರೈತರ ಹೊಲಗಳನ್ನು ರಕ್ಷಿಸುವಂತೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಿವಿಮಾತು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಅದೂ ಕೂಡ ರಾಷ್ಟ್ರವಾದವಾಗಿದೆ ಎಂದರು.
ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ತನ್ನ ತಾಯಿ ಸೋನಿಯಾ ಗಾಂಧಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ,ನೀವು(ಮೋದಿ) ಜನರನ್ನು ಪಾಕಿಸ್ತಾನದ ಆಕ್ರಮಣದಿಂದ ರಕ್ಷಿಸುತ್ತಿದ್ದೀರಿ. ಇದೊಂದು ದೊಡ್ಡ ಸಾಧನೆ. ಆದರೆ ನೀವು ರೈತರ ಹೊಲಗಳನ್ನೂ ರಕ್ಷಿಸಬೇಕು. ಅದು ಕೂಡ ರಾಷ್ಟ್ರವಾದವಾಗಿದೆ ಎಂದು ಹೇಳಿದರು.
ಜನರನ್ನು ಪ್ರೀತಿಸುವುದು ಎಂದರೆ ಅವರನ್ನು ಗೌರವಿಸುವುದು ಎಂದೂ ಅರ್ಥವಾಗುತ್ತದೆ. ಅವರು ಏನಾದರೂ ಹೇಳುತ್ತಿದ್ದರೆ ಅದು ಪ್ರಜಾಪ್ರಭುತ್ವದ ಧ್ವನಿಯಾಗಿರುವುದರಿಂದ ಪ್ರಧಾನಿಯಾಗಿ ನೀವು ಅದನ್ನು ಆಲಿಸಬೇಕಾಗುತ್ತದೆ. ನೀವು ರೈತರು,ಯುವಜನರು ಮತ್ತು ಮಹಿಳೆಯರನ್ನು ಕಡೆಗಣಿಸುತ್ತಿದ್ದೀರಿ. ಇದು ಯಾವ ಬಗೆಯ ರಾಷ್ಟ್ರವಾದ ಎಂದು ಅವರು ಪ್ರಶ್ನಿಸಿದರು.
ನಿಮ್ಮ ಹಕ್ಕುಗಳಿಗಾಗಿ ನೀವು ಪ್ರತಿಭಟನೆಯನ್ನು ನಡೆಸಿದಾಗ ನಿಮ್ಮ ಧ್ವನಿಯನ್ನು ಉಡುಗಿಸಲಾಗುತ್ತದೆ. ಏಕೆಂದರೆ ಸರಕಾರಕ್ಕೆ ನಿಮ್ಮ ಶಕ್ತಿಯ ಬಗ್ಗೆ ಹೆದರಿಕೆಯಿದೆ, ಕಳೆದ ಐದು ವರ್ಷಗಳಲ್ಲಿ ತಾವು ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಅವರದು ಬಹುಮತದ ಸರಕಾರವಾಗಿತ್ತು,ಆದರೆ ಅವರು ಜನರ ಹಿತಾಸಕ್ತಿಗಾಗಿ ಏನನ್ನೂ ಮಾಡಲಿಲ್ಲ ಎಂದು ಪ್ರಿಯಾಂಕಾ ನುಡಿದರು.
ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ಮತದಾನ ನಡೆಯಲಿದೆ.