ಅಂಡಮಾನ್, ನಿಕೋಬಾರ್: ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರಿಗೆ ಮುಖ್ಯಮಂತ್ರಿ ಸಹಾಯಹಸ್ತ

ಬೆಂಗಳೂರು, ಮೇ 4: ಪ್ರವಾಸದ ನಿಮಿತ್ತ ಅಂಡಮಾನ್ ಮತ್ತು ನಿಕೋಬಾರ್ಗೆ ತೆರಳಿ ವಿಮಾನ ಲಭ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 50 ಮಂದಿ ಕನ್ನಡಿಗರ ಸಮಸ್ಯೆ ರಾಜ್ಯ ಸರಕಾರದ ಮಧ್ಯಪ್ರವೇಶದಿಂದ ಬಗೆಹರಿದಿದೆ.
ಪ್ರವಾಸದಲ್ಲಿದ್ದ ಮೂಡಿಗೆರೆಯ ಹಿರಿಯ ಸಿವಿಲ್ ನ್ಯಾಯಾಧೀಶೆ ಶಶಿಕಲಾ ತಮ್ಮ ಸಮಸ್ಯೆಯನ್ನು ದೂರವಾಣಿ ಮೂಲಕ ಶನಿವಾರ ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ತಂದಿದ್ದರು. ಈ ವಿಷಯವನ್ನು ಕಚೇರಿ ಸಿಬ್ಬಂದಿ ಮುಖ್ಯಮಂತ್ರಿಯ ಗಮನಕ್ಕೆ ತಂದರು. ಕೂಡಲೆ ಪರಿಸ್ಥಿತಿಯನ್ನು ನಿಭಾಯಿಸಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರಿಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ದಿಲ್ಲಿಯಲ್ಲಿರುವ ನಿವಾಸಿ ಆಯುಕ್ತರಿಗೆ ಸೂಚಿಸಿದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ದಿಲ್ಲಿಯ ನಿವಾಸಿ ಆಯುಕ್ತರು ಸಮಸ್ಯೆಯನ್ನು ಬಗೆಹರಿಸಿದ್ದು, ಕನ್ನಡಿಗರು ನಾಳೆ ಬೆಳಗಿನ ವಿಮಾನದಲ್ಲಿ ಅಂಡಮಾನ್ ಮತ್ತು ನಿಕೋಬಾರ್ನಿಂದ ಬೆಂಗಳೂರಿಗೆ ಹಿಂದಿರುಗಲು ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





