ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ :ಕಿರಣ್ ಖೇರ್ಗೆ ಆಯೋಗದ ನೋಟಿಸ್

ಹೊಸದಿಲ್ಲಿ,ಮೇ 4: ಚಂಡಿಗಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕಿರಣ್ ಖೇರ್ ಅವರು ಮಕ್ಕಳು ತನಗಾಗಿ ಚುನಾವಣಾ ಪ್ರಚಾರ ಮಾಡಿರುವ ವೀಡಿಯೊವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅವರಿಗೆ ನೋಟಿಸ್ ಹೊರಡಿಸಿದ್ದು,24 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.
ಚುನಾವಣಾಧಿಕಾರಿಗಳು ಅಥವಾ ರಾಜಕೀಯ ಪಕ್ಷಗಳು ಯಾವುದೇ ಚುನಾವಣೆ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳದಂತೆ ನೋಡಿಕೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಜ.2017ರಲ್ಲಿ ಮಾಡಿಕೊಂಡಿದ್ದ ಮನವಿಯ ಮೇರೆಗೆ ಚುನಾವಣಾ ಆಯೋಗವು ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ನಿರ್ದೇಶವನ್ನು ಹೊರಡಿಸಿತ್ತು. ಈ ವಿಷಯವನ್ನು ಖೇರ್ ಅವರಿಗೆ ನೀಡಲಾಗಿರುವ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಚಂಡಿಗಡ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಯನ್ನು ಬಯಸಿರುವ ಖೇರ್ ನಾಲ್ಕು ಬಾರಿಯ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪವನ ಕುಮಾರ ಬನ್ಸಾಲ್ ಮತ್ತು ಆಪ್ನ ಹರಮೋಹನ್ ಧವನ್ ಅವರನ್ನು ಎದುರಿಸುತ್ತಿದ್ದು, ಮೇ 19ರಂದು ಮತದಾನ ನಡೆಯಲಿದೆ.