ಸರ್ಜಿಕಲ್ ದಾಳಿಯನ್ನು ವೀಡಿಯೊ ಗೇಮ್ ಎಂದ ಮೋದಿಯಿಂದ ಸೇನೆಗೆ ಅವಮಾನ: ರಾಹುಲ್

ಹೊಸದಿಲ್ಲಿ, ಮೇ 4: ಯುಪಿಎ ಆಡಳಿತ ಅವಧಿಯಲ್ಲಿ ನಡೆದ ಸರ್ಜಿಕಲ್ ದಾಳಿ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಅವರು ಹೀಗೆ ಹೇಳುವ ಮೂಲಕ ಸೇನೆಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭೂಸೇನೆ, ನೌಕಾಪಡೆ ಹಾಗೂ ವಾಯು ಪಡೆ ನರೇಂದ್ರ ಮೋದಿಜಿ ಅವರ ವೈಯಕ್ತಿಕ ಸೊತ್ತಲ್ಲ. ಯುಪಿಎ ಆಡಳಿತ ಅವಧಿಯಲ್ಲಿ ನಡೆದ ಸರ್ಜಿಕಲ್ ದಾಳಿಯನ್ನು ಅವರು ವೀಡಿಯೊ ಗೇಮ್ ಎಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ಅವರು ಕಾಂಗ್ರೆಸ್ ಅನ್ನು ಮಾತ್ರವಲ್ಲದೆ, ಸೇನೆಯನ್ನು ಕೂಡ ಅವಮಾನಿಸಿದ್ದಾರೆ. ಈ ದಾಳಿಗಳನ್ನು ನಡೆಸಿರುವುದು ಸೇನೆ. ಇದನ್ನು ನಾವು ರಾಜಕೀಯಗೊಳಿಸಬಾರದು. ಪ್ರಧಾನಿ ಅವರು ಸೇನೆಗೆ ಅವಮಾನ ಮಾಡಬಾರದು ಎಂದರು. ರಫೇಲ್ ಪ್ರಕರಣದ ವಿಚಾರಣೆ ಪ್ರಕ್ರಿಯೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ.
ರಫೇಲ್ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್ ಹೇಳಿದೆ ಎಂದು ನಾನು ಹೇಳಿಕೆ ನೀಡಿದ್ದೆ. ಆದುದರಿಂದ ನಾನು ಕ್ಷಮೆ ಯಾಚಿಸಿದ್ದೇನೆ. ನಾನು ಬಿಜೆಪಿ ಅಥವಾ ಮೋದಿಜಿ ಅವರ ಕ್ಷಮೆ ಕೇಳಿಲ್ಲ. ‘ಚೌಕಿದಾರ ಚೋರ’ ಎಂಬ ನಮ್ಮ ಘೋಷಣೆ ಇನ್ನು ಕೂಡ ಹಾಗೆಯೇ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಮಸೂದ್ ಅಝರ್ ಬಿಡುಗಡೆ ವಿಷಯದ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮಸೂದ್ ಅಝರ್ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ, ಆತನನ್ನು ಪಾಕಿಸ್ತಾನಕ್ಕೆ ಹಿಂದೆ ಕಳುಹಿಸಿದವರು ಯಾರು ?, ಭಯೋತ್ಪಾದನೆಗೆ ತಲೆ ಬಾಗಿಸಿದವರು ಯಾರು ಹಾಗೂ ಆತನನ್ನು ಬಿಡುಗಡೆ ಮಾಡಿದವರು ಯಾರು ? ಕಾಂಗ್ರೆಸ್ ಅಲ್ಲ. ಬದಲಾಗಿ ಬಿಜೆಪಿ ಸರಕಾರ ಎಂದರು.
ಚುನಾವಣೆ ಪ್ರಕ್ರಿಯೆಯ ಅರ್ಧಕ್ಕಿಂತ ಹೆಚ್ಚು ಭಾಗ ಮುಗಿದಿದೆ. ಮೋದಿ ಜಿ ಅವರು ಸೋಲುಣ್ಣುತ್ತಾರೆ ಎಂಬುದು ಸ್ಪಷ್ಟವಾಗಿದೆ. ನಮ್ಮ ಸಾಮಾನ್ಯ ಅಂದಾಜಿನ ಪ್ರಕಾರ ಈ ಚುನಾವಣೆಯಲ್ಲಿ ಬಿಜೆಪಿ ಸೋತು ಹೋಗಲಿದೆ ಎಂದು ಅವರು ಹೇಳಿದರು. ಪ್ರಸ್ತುತ ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ನಿರುದ್ಯೋಗ. 2 ಕೋಟಿ ಉದ್ಯೋಗದ ಭರವಸೆಯನ್ನು ಯಾಕೆ ಈಡೇರಿಸಿಲ್ಲ ಎಂದು ದೇಶ ಮೋದಿ ಅವರನ್ನು ಪ್ರಶ್ನಿಸುತ್ತಿದೆ. ಅವರು ಉದ್ಯೋಗ, ರೈತರ ಬಗ್ಗೆ ಒಂದು ಮಾತನ್ನು ಕೂಡ ಆಡುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.