ಹಿಂಸಾಚಾರದ ನಡುವೆ ಶೇ.62.5 ಮತದಾನ
ಲೋಕಸಭಾ ಚುನಾವಣೆ ಐದನೇ ಹಂತ

ಹೊಸದಿಲ್ಲಿ,ಮೇ 6: ಸೋಮವಾರ ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿ ಸುಮಾರು ಶೇ.62.5ರಷ್ಟು ಮತದಾನವಾಗಿದೆ. ಪ.ಬಂಗಾಳ ಮತ್ತು ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರಗಳಿಗೆ ಐದನೇ ಹಂತದ ಚುನಾವಣೆಯು ಸಾಕ್ಷಿಯಾಗಿದ್ದು,ಬಂಗಾಳದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಓರ್ವ ಬಿಜೆಪಿ ಅಭ್ಯರ್ಥಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಅತ್ತ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮತಗಟ್ಟೆಯೊಂದಕ್ಕೆ ಗ್ರೆನೇಡ್ ಎಸೆಯಲಾಗಿದ್ದರೆ, ಇನ್ನೊಂದೆಡೆ ಸ್ಫೋಟ ನಡೆಸಲಾಗಿದೆ.
ಏಳು ರಾಜ್ಯಗಳ 51 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಿದ್ದು,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೇಂದ್ರ ಸಚಿವ ರಾಜನಾಥ ಸಿಂಗ್ ಇವರಲ್ಲಿ ಸೇರಿದ್ದಾರೆ. ತೃಣಮೂಲ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪ.ಬಂಗಾಳದ ಬರಾಕ್ಪೋರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ ಸಿಂಗ್ ಆರೋಪಿಸಿದ್ದಾರೆ.
ಮತಗಟ್ಟೆಗಳನ್ನು ದೋಚಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ಕಾರಿನ ಮೇಲೆ ದಾಳಿ ನಡೆಸಲಾಗಿದೆ.
ಕಾಶ್ಮೀರದ ಪುಲ್ವಾಮಾದಲ್ಲಿ ಒಂದು ಮತಗಟ್ಟೆಗೆ ಗ್ರೆನೇಡ್ ಎಸೆಯಲಾಗಿದ್ದರೆ,ಇನ್ನೊಂದನ್ನು ಸ್ಫೊಟಿಸಲಾಗಿದೆ. ಈ ಘಟನೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಇದು ರಾಜ್ಯದಲ್ಲಿ ಮತದಾನ ದಿನದಲ್ಲಿ ನಡೆದಿರುವ ಮೊದಲ ಭಯೋತ್ಪಾದಕ ಕೃತ್ಯವಾಗಿದೆ. ನಾಲ್ಕನೇ ಸತತ ಅವಧಿಗೆ ಪುನರಾಯ್ಕೆ ಬಯಸಿ ಉ.ಪ್ರದೇಶದ ಅಮೇಠಿಯಲ್ಲಿ ಕಣಕ್ಕಿಳಿದಿರುವ ರಾಹುಲ್ ಎದುರು ಸ್ಪರ್ಧಿಸಿರುವ ಬಿಜೆಪಿ ನಾಯಕಿ ಸ್ಮತಿ ಇರಾನಿ ಕಾಂಗ್ರೆಸ್ ಮತಗಟ್ಟೆಯನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿ ಟ್ವೀಟಿಸಿದ್ದಾರೆ.
ರಾಜಸ್ಥಾನದ ಜೈಪುರ ಗ್ರಾಮೀಣ ಕ್ಷೇತ್ರವು ಇಬ್ಬರು ಮಾಜಿ ಒಲಿಂಪಿಯನ್ಗಳಾದ ಬಿಜೆಪಿಯ ರಾಜ್ಯವರ್ಧನ ರಾಠೋಡ್ ಮತ್ತು ಕಾಂಗ್ರೆಸ್ನ ಕೃಷ್ಣಾ ಪೂನಿಯಾ ಅವರ ಸ್ಪರ್ಧೆಯಿಂದಾಗಿ ಗಮನ ಸೆಳೆದಿತ್ತು.
ಬಾಕಿಯುಳಿದಿರುವ 118 ಸ್ಥಾನಗಳಿಗಾಗಿ ಮೇ 12 ಮತ್ತು ಮೇ 19ರಂದು ಮತದಾನ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.