ಬಾಲಕೋಟ್ ದಾಳಿ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್

ಗುರುದಾಸಪುರ್ : ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಸಿನೆಮಾಗಳಲ್ಲಿ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿರಬಹುದು, ಆದರೆ ನಿಜ ಜೀವನದಲ್ಲಿ ಮಾತ್ರ ಎಲ್ಲವೂ ಭಿನ್ನ.
''ಚಲನಚಿತ್ರಗಳ ವಿಚಾರ ಬೇರೆ. ಇದು ಸಿನೆಮಾ ಅಲ್ಲ, ನಿಜ ಜೀವನ. ನನ್ನ ಜೀವನದಲ್ಲಿ ಯಾವತ್ತೂ ಪಾಸಿಟಿವ್ ಪಾತ್ರಗಳನ್ನಷ್ಟೇ ಮಾಡಿದ್ದೇನೆ, ನನ್ನ ಭಾವನೆಗಳೂ ಅವೇ ರೀತಿಯಾಗಿದೆ. ಬಾಲಕೋಟ್ ದಾಳಿ ಅಥವಾ ಭಾರತ-ಪಾಕ್ ಸಂಬಂಧಗಳ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಜನರ ಸೇವೆಗಾಗಿ ನಾನಿಲ್ಲಿದ್ದೇನೆ. ನಾನು ಗೆದ್ದರೆ ಪ್ರಾಯಶ: ಏನಾದರೂ ನಿರ್ದಿಷ್ಟ ಅಭಿಪ್ರಾಯ ತಾಳಬಹುದು, ಸದ್ಯ ಏನೂ ಇಲ್ಲ'' ಎಂದು ಡಿಯೋಲ್ ಹೇಳಿದರು.
''ಕಳೆದ ಐದು ವರ್ಷಗಳಲ್ಲಿ ಮೋದೀ ಜಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಉತ್ತಮ ಕೆಲಸಗಳನ್ನು ಅವರು ಮುಂದುವರಿಸಿಕೊಂಡು ಹೋಗಬೇಕೆಂದು ಬಯಸುತ್ತೇನೆ. ದೇಶದಲ್ಲಿ ಏಕತೆ ಕಾಪಾಡಿಕೊಂಡು ಪ್ರಗತಿಯತ್ತ ದೇಶವನ್ನು ಸಾಗಿಸುವುದು ಒಬ್ಬ ಉತ್ತಮ ನಾಯಕನ ಲಕ್ಷಣ,'' ಎಂದು ಅವರು ಹೇಳಿದರು.
ಬಿಸಿಲಿನ ಝಳದ ನಡುವೆಯೂ ಸೋಮವಾರ ಅವರು 5 ಗಂಟೆ ಅವಧಿಯ ರೋಡ್ ಶೋ ನಡೆಸಿದ್ದಾರೆ. ಇದು ಗುರುದಾಸಪುರದಲ್ಲಿ ಸತತ ಮೂರನೇ ದಿನ ಅವರು ನಡೆಸಿದ ರೋಡ್ ಶೋ ಆಗಿದೆ.
''ನನಗೆ ನನ್ನ ದೇಶ ಸೇವೆ ಮಾಡಬೇಕು. ಗೆದ್ದರೆ ಏನಾದರೂ ಒಳ್ಳೆಯ ಕೆಲಸ ಮಾಡುತ್ತೇನೆ. ರಾಜಕಾರಣಿಗಳು ಏನೂ ಮಾಡುವುದಿಲ್ಲ ಎಂದು ಜನರು ಹೇಳುತ್ತಾರೆ. ಇಂತಹ ಭಾವನೆ ಹೋಗಲಾಡಿಸಲು ರಾಜಕೀಯಕ್ಕೆ ಬಂದಿದ್ದೇನೆ,'' ಎಂದು ಸನ್ನಿ ಹೇಳಿದರು.