ಕಾರ್ಯಕರ್ತನ ಹತ್ಯೆ: ತನ್ನ ಭದ್ರತೆ ಹಿಂದಿರುಗಿಸಿದ ಬಿಜೆಪಿ ಪದಾಧಿಕಾರಿ

ಶ್ರೀನಗರ,ಮೇ.7: ಉಗ್ರರಿಂದ ಪಕ್ಷದ ನಾಯಕನ ಹತ್ಯೆ ಮತ್ತು ಕಾರ್ಯಕರ್ತರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದಿರುವುದನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ತನಗೆ ನೀಡಲಾಗಿದ್ದ ಭದ್ರತೆ ಮತ್ತು ವಾಹನವನ್ನು ಹಿಂದಿರುಗಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅನಂತ್ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಗುಲ್ ಮುಹಮ್ಮದ್ ಮಿರ್ ಅವರನ್ನು ಉಗ್ರರು ಹತ್ಯೆ ಮಾಡಿರುವುದನ್ನು ಖಂಡಿಸಿ ಮತ್ತು ರಾಜಕೀಯ ಕಾರ್ಯಕರ್ತರಿಗೆ ಭದ್ರತೆ ಒದಗಿಸಲು ಆಡಳಿತವರ್ಗ ವಿಫಲವಾಗಿರುವುದನ್ನು ಖಂಡಿಸಿ ಶ್ರೀನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ ಭದ್ರತಾ ವಿಭಾಗ ನೀಡಿದ್ದ ಭದ್ರತೆ ಮತ್ತು ವಾಹನವನ್ನು ಕೌಲ್ ಹಿಂದಿರುಗಿಸಿದ್ದಾರೆ. ರಾಜ್ಯದ ಎಲ್ಲ ರಾಜಕೀಯ ಕಾರ್ಯಕರ್ತರಿಗೆ ಭದ್ರತೆ ಒದಗಿಸುವವರೆಗೆ ತಾನು ತನಗೆ ನೀಡಲಾದ ಭದ್ರತೆಯನ್ನು ಸ್ವೀಕರಿಸುವುದಿಲ್ಲ ಎಂದು ಕೌಲ್ ತಿಳಿಸಿದ್ದಾರೆ.
ಮಿರ್ ಹತ್ಯೆ ರಾಜ್ಯ ಸರಕಾರದ ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಆರೋಪಿಸಿರುವ ಕೌಲ್, ನಾವು ಮನವಿ ಮಾಡಿದ ನಂತರ 2018ರಲ್ಲಿ ಮಿರ್ಗೆ ಸರಕಾರ ಭದ್ರತೆ ಒದಗಿಸಿತ್ತು. ಓರ್ವ ಪೇದೆ ಮತ್ತು ಎಸ್ಪಿಒಅನ್ನು ಅವರ ಭದ್ರತೆಗೆ ನೀಡಲಾಗಿತ್ತು. ಆದರೆ ದುರದೃಷ್ಟವಶಾತ್ 2018ರ ಡಿಸೆಂಬರ್ನಲ್ಲಿ ಪೇದೆಯನ್ನು ಹಿಂಪಡೆದುಕೊಳ್ಳಲಾಗಿತ್ತು. ಆನಂತರ ಅವರ ನಿವಾಸದ ಮೇಲೆ ದಾಳಿ ನಡೆಯಿತು. ಆದರೆ ದಾಳಿಕೋರರ ವಿರುದ್ಧ ಹೋರಾಡಿದ ಮಿರ್ ತನ್ನನ್ನು ಮಾತ್ರವಲ್ಲ ಎಸ್ಪಿಒ ಜೀವವನ್ನೂ ಉಳಿಸಿದ್ದರು ಎಂದು ತಿಳಿಸಿದ್ದಾರೆ.