ನೀತಿ ಸಂಹಿತೆ ಉಲ್ಲಂಘನೆ: ನ್ಯಾಯಾಲಯಕ್ಕೆ ಶರಣಾದ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್

ಬೇಗುಸರಾಯಿ,ಮೇ.7: ಚುನಾವಣಾ ರ್ಯಾಲಿಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ಸ್ಥಳೀಯ ನ್ಯಾಯಾಲಯದ ಮುಂದೆ ಶರಣಾದರು.
ಜನರ ಪ್ರತಿನಿಧಿತ್ವ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿಧಿಗಳಡಿ ಸಿಂಗ್ ವಿರುದ್ಧ ದೂರು ದಾಖಲಿಸಲಾಗಿದ್ದು, ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಠಾಕೂರ್ ಅಮನ್ ಕುಮಾರ್ ಅವರು ಗಿರಿರಾಜ್ ಸಿಂಗ್ಗೆ ಜಾಮೀನು ನೀಡಿದ್ದಾರೆ. ಎಪ್ರಿಲ್ 24ರಂದು ಬೇಗುಸರಾಯಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುವ ವೇಳೆ, ವಂದೇ ಮಾತರಂ ಎಂದು ಹೇಳಲಾಗದವರು ಅಥವಾ ತನ್ನ ಮಾತೃಭೂಮಿಯನ್ನು ಗೌರವಿಸದವರನ್ನು ದೇಶ ಎಂದೂ ಕ್ಷಮಿಸುವುದಿಲ್ಲ. ನನ್ನ ಪೂರ್ವಜರು ಸಿಮರಿಯ ಘಾಟ್ನಲ್ಲಿ ಸಾವನ್ನಪ್ಪಿದರು ಮತ್ತು ಅವರಿಗೆ ಸಮಾಧಿಯ ಅಗತ್ಯವಿಲ್ಲ. ಆದರೆ ನಿಮಗೆ ಮಾತ್ರ ಜಾಗದ ಅಗತ್ಯವಿದೆ ಎಂದು ಸಿಂಗ್ ಹೇಳಿಕೆ ನೀಡಿದ್ದರು.
ಸದ್ಯ ಸಿಂಗ್ಗೆ ಜಾಮೀನು ನೀಡಿರುವ ನ್ಯಾಯಾಲಯ ತಲಾ 5,000ರೂ.ನ ಎರಡು ಜಾಮೀನು ಬಾಂಡ್ಗಳನ್ನು ಸಲ್ಲಿಸುವಂತೆ ಸೂಚಿಸಿದೆ.