ಚುನಾವಣೆ ಸಂದರ್ಭ ವಶಪಡಿಸಿದ ನಗದಿನ ಸ್ಥಿತಿ ವರದಿಯನ್ನು 1 ದಿನದ ಒಳಗೆ ನೀಡಿ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮೇ 7: 2014 ಹಾಗೂ 2019ರ ಲೋಕಸಭಾ ಚುನಾವಣೆ ಸಂದರ್ಭ ವಶಪಡಿಸಿಕೊಳ್ಳಲಾದ ನಗದಿಗೆ ಸಂಬಂಧಿಸಿದ ಪ್ರಕರಣಗಳ ಸ್ಥಿತಿ ವರದಿಯನ್ನು 24 ಗಂಟೆಗಳ ಒಳಗೆ ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.
ಐದು ವರ್ಷಗಳ ಹಿಂದೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ನಗದು ವಶಪಡಿಸಿಕೊಂಡ ಪ್ರಕರಣ ರದ್ದುಗೊಳಿಸಿದ ಉಚ್ಚ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕರ್ನಾಟಕ ಸರಕಾರ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರ ಸಲ್ಲಿಸಿದ ವಿವರ ಸಮರ್ಪಕವಾಗಿಲ್ಲ ಎಂದು ಹೇಳಿದೆ.
''ನಿಮಗೆ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಡಿಟಿ (ನೇರ ತೆರಿಗೆಯ ಕೇಂದ್ರ ಮಂಡಳಿ) ಹಾಗೂ ಆದಾಯ ತೆರಿಗೆ ಇಲಾಖೆ ಇರುವಾಗ, ಚುನಾವಣಾ ಆಯೋಗದ ದತ್ತಾಂಶವನ್ನು ಯಾಕೆ ಸಲ್ಲಿಸಿದಿರಿ ?. ಈ ಸಂಸ್ಥೆಗಳಿಂದ ವಿವರಗಳನ್ನು ತನ್ನಿ ಹಾಗೂ ನಾಳೆಯೊಳಗೆ ಅಫಿದಾವಿತ್ ಸಲ್ಲಿಸಿ'' ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ''ಇದನ್ನು ನಿಮಗೆ ಮಾಡಲು ಸಾಧ್ಯವಾಗದೇ ಇದ್ದರೆ, ಈ ಸಂಸ್ಥೆಗಳನ್ನು ಚುನಾವಣಾ ಆಯೋಗದ ವ್ಯಾಪ್ತಿಗೆ ತನ್ನಿ'' ಎಂದು ಕುಟುಕಿದ ಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಚುನಾವಣೆ ಪೂರ್ಣಗೊಂಡ ಬಳಿಕ ಇಂತಹ ಪ್ರಕರಣಗಳು ಏನಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುತ್ತಿದೆ. ಈ ಹಿಂದಿನ ವಿಚಾರಣೆಯ ಸಂದರ್ಭ ಸುಪ್ರೀಂ ಕೋರ್ಟ್, ತಮಗೆ ಸಮಸ್ಯೆ ಉಂಟಾಗಬಹುದು ಎಂಬ ಭೀತಿಯಿಂದ ಯಾವುದೇ ರಾಜಕೀಯ ಪಕ್ಷವೂ ಚುನಾವಣಾ ಆಯೋಗ ಸಬಲಗೊಳಿಸಲು ಬಯಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಈಗ ನಡೆಯುತ್ತಿರುವ ಚುನಾವಣೆ ಸಂದರ್ಭ ಜಾರಿ ನಿರ್ದೇಶನಾಲಯ ಪ್ರತಿ ದಿನ 100 ಕೋಟಿ ರೂಪಾಯಿಯ ನಗದು ಹಾಗೂ ಸರಕಗಳನ್ನು ವಶಪಡಿಸಿಕೊಂಡಿದೆ. 2014ರಲ್ಲಿ 1200 ಕೋಟಿ ರೂಪಾಯಿ ನಗದು ಹಾಗೂ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಅದು 3,205 ಕೋಟಿ ರೂಪಾಯಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.