ನಯನಾಡು: ಧರ್ಮಸ್ಥಳ ಮಂಜುನಾಥ ಸಂಚಾರಿ ಆಸ್ಪತ್ರೆಗೆ ಚಾಲನೆ

ಬಂಟ್ವಾಳ, ಮೇ 8: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟ್ ಇದರ ಸಹಯೋಗದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವಗ್ಗ ವಲಯದ ಪಿಲಾತಬೆಟ್ಟು ಕಾರ್ಯಕ್ಷೇತ್ರದ ಒಕ್ಕೂಟಗಳ ಮತ್ತು ನಯನಾಡು ನಯನಾಡು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್, ಶ್ರೀರಾಮ ಯುವಕ ಮಂಡಲದ ಸಹಕಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಸ್ಪತ್ರೆಯ ಉಚಿತ ಚಿಕಿತ್ಸಾ ಶಿಬಿರಕ್ಕೆ ಪಿಲಾತಬೆಟ್ಟು ಗ್ರಾಮದ ನಯನಾಡು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್ನಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಹರೀಂದ್ರ ಪೈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದಿಂದ ನಡೆಸುತ್ತಿರುವ ಸಂಚಾರಿ ಆಸ್ಪತ್ರೆಯಿಂದ ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯ ಕಾಳಜಿಗೆ ಸಹಕಾರಿಯಾಗಿದ್ದು, ವರದಾನವಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮಗಳ ಅಭಿವೃದ್ಧಿಯಾಗಿದೆ. ಸಂಪೂರ್ಣ ಸುರಕ್ಷಾ ಯೋಜನೆ ಮೂಲಕ ವಿಮಾ ಸೌಲಭ್ಯಗಳ ಜಾಗೃತಿ ಮೂಡುವಂತಾಗಿದೆ ಎಂದು ಹೇಳಿದರು.
ಸಂಗಬೆಟ್ಟು ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಸರಕಾರಗಳಿಂದ ಸಾಧ್ಯವಾಗದ ಜನೋಪಯೋಗಿ ಕಾರ್ಯಕ್ರಮಗಳು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಸಾಧ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಹಳ್ಳಿಗಳಿಗೆ ತಲುಪುವ ಮೂಲಕ ದೇಶದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕುಮಂಗಿಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಸ್ಥರು ಸಂಚಾರಿ ಆಸ್ಪತ್ರೆಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ತಾಪಂ ಸದಸ್ಯ ರಮೇಶ್ ಪೂಜಾರಿ ಕುಡ್ಮೇರು, ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ಶುಭ ಹಾರೈಸಿದರು.
ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾರಾಯಣ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಚಾರಿ ಆಸ್ಪತ್ರೆಯಲ್ಲಿ ದೊರಕುವ ಚಿಕಿತ್ಸಾ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ವಗ್ಗ ವಲಯ ಮೇಲ್ವಿಚಾರಕ ಜಯಕುಮಾರ್ ಅವರು ಶಿಬಿರದ ವಿವರ ನೀಡಿದರು.
ಒಕ್ಕೂಟಗಳ ಅಧ್ಯಕ್ಷ ರಮೇಶ್ ಪೂಜಾರಿ, ಸುಮಿತ್ರಾ, ನಯನಾಡು ಮತ್ತು ಪಿಲಾತಬೆಟ್ಟು ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪಿಲಾತಬೆಟ್ಟು ಸೇವಾ ಪ್ರತಿನಿಧಿ ಅಮೃತಾ ಎಸ್. ಸ್ವಾಗತಿಸಿ, ಶ್ರೀರಾಮ ಯುವಕ ಮಂಡಲದ ಹರೀಶ್ ಶೆಟ್ಟಿ ಕಾರ್ಯಕ್ರಮ ವಂದಿಸಿದರು. ಮುಂದಿನ ಎರಡು ತಿಂಗಳು ಶಿಬಿರ ನಡೆಯಲಿದೆ.







