ದಿಗ್ವಿಜಯ್ ಸಿಂಗ್ ರ್ಯಾಲಿಯಲ್ಲಿ ಕೇಸರಿ ಶಾಲು ಧರಿಸಿದ ಪೋಲಿಸರು: ಆರೋಪ

ಭೋಪಾಲ, ಮೇ 8: ಭೋಪಾಲದಲ್ಲಿ ನಡೆದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಾಗೂ ಕಂಪ್ಯೂಟರ್ ಬಾಬಾ ಎಂದು ಕರೆಯಲಾಗುವ ನಾಮ್ದಾಸ್ ತ್ಯಾಗಿ ರೋಡ್ ಶೋ ಸಂದರ್ಭ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಸಮವಸ್ತ್ರದ ಮೇಲೆ ಕೇಸರಿ ಶಾಲು ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.
“ನೀವು ಯಾಕೆ ಕೇಸರಿ ಶಾಲು ಹಾಕಿದಿರಿ ?” ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಪೊಲೀಸ್ ಅಧಿಕಾರಿಗಳು, ‘‘ಕಂಪ್ಯೂಟರ್ ಬಾಬಾ ಆಯೋಜಿಸಿದ ರೋಡ್ ಶೋನಲ್ಲಿ ಭದ್ರತೆ ನೀಡಲು ನಮ್ಮನ್ನು ನಿಯೋಜಿಸಲಾಗಿತ್ತು. ಇಲ್ಲಿ ಕೇಸರಿ ಶಾಲು ಧರಿಸುವಂತೆ ನಮಗೆ ಸೂಚಿಸಲಾಗಿತ್ತು’’ ಎಂದಿದ್ದಾರೆ. ಕೇಸರಿ ಶಾಲು ಧರಿಸುವಂತೆ ಅವರಿಗೆ ಹಾಗೂ ಇತರ ಅಧಿಕಾರಿಗಳಿಗೆ ಯಾರು ನಿರ್ದೇಶಿಸಿದರು ಎಂದು ಹೇಳಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ಇದಕ್ಕೆ ವಿರೋಧಾಭಾಸವಾಗಿ ಕೆಲವು ಪೊಲೀಸರು, ಕೇಸರಿ ಶಾಲು ಹಾಕಿ ಪಾಲ್ಗೊಂಡವರು ಸ್ವಯಂ ಸೇವಕರು. ಅವರು ಪೊಲೀಸ್ ಸಿಬ್ಬಂದಿಯಲ್ಲ ಎಂದು ಹೇಳಿದ್ದಾರೆ.
‘‘ನಾವು ಮತ್ತು ಕಾರ್ಯಕ್ರಮದ ಪ್ರಾಯೋಜಕರು ಸ್ವಯಂ ಸೇವಕರನ್ನು ದಾಖಲು ಮಾಡಿಕೊಂಡಿದ್ದೆವು. ಕೇಸರಿ ಧರಿಸುವಂತೆ ನಾವು ಸ್ವಯಂ ಸೇವಕರಿಗೆ ಹೇಳಿಲ್ಲ. ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ಗಳು ಕೇಸರಿ ಶಾಲು ಧರಿಸಿಲ್ಲ. ಸ್ವಯಂ ಸೇವಕರು ಪೊಲೀಸ್ ಅಧಿಕಾರಿಗಳಲ್ಲ. ಅವರು ತಾವು ಪೊಲೀಸ್ ಅಧಿಕಾರಿಗಳು ಎಂದು ಹೇಳಿದ್ದರೆ ಅದು ಸುಳ್ಳು. ಅವರು ಪೊಲೀಸ್ ಅಧಿಕಾರಿಗಳಲ್ಲ ಎಂಬುದಕ್ಕೆ ನಮ್ಮಲ್ಲಿ ದಾಖಲೆ ಇದೆ’’ ಎಂದು ಭೋಪಾಲ್ ಡಿಐಜಿ ಇರ್ಶಾದ್ ವಾಲಿ ಹೇಳಿದ್ದಾರೆ.
ನ್ಯಾಯಸಮ್ಮತವಾಗಿ ರ್ಯಾಲಿ ನಡೆದಿದೆ. ಈ ರ್ಯಾಲಿಯ ನಡುವೆ ಕೆಲವರು ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದ್ದಾರೆ. ನಾವು ಕ್ರಮ ಕೈಗೊಳ್ಳಲಿದ್ದೇವೆ. ನಾವು ಎಲ್ಲ ವ್ಯಕ್ತಿಗಳನ್ನು ಗುರುತಿಸಲಿದ್ದೇವೆ ಹಾಗೂ ಬಿಜೆಪಿ ಕಾರ್ಯಕರ್ತರು ಇದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪರಿಶೀಲಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.