ಬಾಲಾಕೋಟ್ ದಾಳಿ: ಇಟಲಿ ಪತ್ರಕರ್ತೆ ಹೇಳುವುದೇನು?

ಹೊಸದಿಲ್ಲಿ, ಮೇ 9: ಪಾಕಿಸ್ತಾನದ ಬಾಲಾಕೋಟ್ನಲ್ಲಿದ್ದ ಜೆಇಎಂ ಉಗ್ರರ ಶಿಬಿರಗಳ ಮೇಲೆ ಭಾರತ ನಡೆಸಿದ ವಾಯುದಾಳಿಯಲ್ಲಿ ಸುಮಾರು 11 ಮಂದಿ ಭಯೋತ್ಪಾದಕ ಟ್ರೈನಿಗಳು ಸೇರಿದಂತೆ 130-170 ಮಂದಿ ಜೆಇಎಂ ಉಗ್ರರು ಮೃತಪಟ್ಟಿರಬಹುದು ಎಂದು ಇಟಲಿ ಪತ್ರಕರ್ತೆ ಫ್ರಾನ್ಸೆಸ್ಕೊ ಮರಿನೊ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇನ್ನೂ 45 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ವರದಿ ಮಾಡಿದ್ದಾರೆ.
ಫೆಬ್ರವರಿ 26ರ ನಸುಕಿನಲ್ಲಿ ನಡೆದ ದಾಳಿಯ ಹಾನಿಯನ್ನು ಮುಚ್ಚಿಡಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದರೂ, ಇದೀಗ ಬಹಿರಂಗವಾಗುತ್ತಿದೆ. ದಾಳಿ ನಡೆದ ದಿನ ಮುಂಜಾನೆ 6ರ ವೇಳೆಗೆ ಅಂದರೆ ದಾಳಿ ನಡೆದ ಎರಡೂವರೆ ಗಂಟೆಗಳ ಬಳಿಕ ಶಿಂಕೈರಿಯಿಂದ ಪಾಕಿಸ್ತಾನ ಸೇನಾ ತುಕಡಿ ಘಟನಾ ಸ್ಥಳಕ್ಕೆ ತಲುಪಿದೆ ಎಂದು ಅವರು ವಿವರಿಸಿದ್ದಾರೆ.
"ಶಿಂಕೈರಿ ಬಾಲಾಕೋಟ್ನಿಂದ 20 ಕಿಲೋ ಮೀಟರ್ ದೂರದಲ್ಲಿದ್ದು, ಪಾಕಿಸ್ತಾನ ಸೇನೆ ಆ ಸ್ಥಳವನ್ನು ತಲುಪಲು 35-40 ನಿಮಿಷ ತೆಗೆದುಕೊಂಡಿದೆ. ಅಲ್ಲಿಂದ ಶಿಬಿರವಿದ್ದ ಸ್ಥಳಕ್ಕೆ ಏರಿದೆ. ಶಿಂಕೈರಿ ಪಾಕಿಸ್ತಾನ ಸೇನೆಯ ನೆಲೆಯೂ ಆಗಿದೆ ಎಂದು ಆನ್ಲೈನ್ ನಿಯತಕಾಲಿಕ ಸ್ಟ್ರಿಂಜರ್ ಏಷ್ಯಾಗೆ ಬರೆದ ಲೇಖನದಲ್ಲಿ ಅವರು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಹರ್ಕತ್ ಅಲ್ ಮುಜಾಹಿದ್ದೀನ್ ಶಿಬಿರಕ್ಕೆ ಕರೆದೊಯ್ಯಲಾಗಿದ್ದು, ಪಾಕಿಸ್ತಾನದ ಸೇನಾ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಶಿಬಿರದಲ್ಲಿ ಇನ್ನೂ ಸುಮಾರು 45 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಗಂಭೀರ ಗಾಯಗಳಾಗಿದ್ದ 20 ಮಂದಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಗುಣಮುಖರಾದವರು ಕೂಡಾ ಸೇನೆಯ ವಶದಲ್ಲಿದ್ದು, ಅವರನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.
ಜೈಶ್ ಸಂಕೀರ್ಣಕ್ಕೆ ಪ್ರವೇಶವನ್ನು ಸೇನೆ ತಡೆಹಿಡಿದಿದೆ. ದಾಳಿ ನಡೆದ ಸ್ಥಳದ ಸನಿಹದವರೆಗೂ ಕೆಲ ಪತ್ರಕರ್ತರನ್ನು ಕರೆದೊಯ್ಯಲಾಗಿದೆ. ಆದರೆ ಯಾರನ್ನೂ ಸಂದರ್ಶಿಸಲು ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ.