ಇಬ್ಬರು ನ್ಯಾಯಾಧೀಶರ ಪದೋನ್ನತಿಗೆ ಕೇಂದ್ರದ ಆಕ್ಷೇಪ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಜ. ಬಿ.ಆರ್. ಗವಾಯಿ, ಜ.ಸೂರ್ಯಕಾಂತ್ ಹೆಸರು ಶಿಫಾರಸು

ಹೊಸದಿಲ್ಲಿ, ಮೇ 9: ಇಬ್ಬರು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟಿಗೆ ಪದೋನ್ನತಿಗೊಳಿಸುವುದಕ್ಕೆ ಕೇಂದ್ರ ಸಲ್ಲಿಸಿದ ಆಕ್ಷೇಪಗಳನ್ನು ತಿರಸ್ಕರಿಸಿದ ದೇಶದ ಅತ್ಯುನ್ನತ ನ್ಯಾಯಾಲಯ, ಜ್ಯೇಷ್ಠತೆಗಿಂತ ಅರ್ಹತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕೆಂದು ಹೇಳಿತು.
ಜಸ್ಟಿಸ್ ಅನಿರುದ್ಧ ಬೋಸ್ ಹಾಗೂ ಜಸ್ಟಿಸ್ ಎ ಎಸ್ ಬೋಪಣ್ಣ ಅವರನ್ನು ಪದೋನ್ನತಿಗೊಳಿಸುವ ಬಗ್ಗೆ ಐದು ಮಂದಿ ಅತ್ಯಂತ ಹಿರಿಯ ನ್ಯಾಯಾಧೀಶರಿರುವ ಸುಪ್ರೀಂ ಕೋರ್ಟಿನ ಕೊಲೀಜಿಯಂ ತನ್ನ ಎಪ್ರಿಲ್ 12ರ ತೀರ್ಮಾನವನ್ನು ಪುನರುಚ್ಛರಿಸಿದೆ.
“ಅರ್ಹತೆಗೆ ಹೆಚ್ಚು ಮಹತ್ವ ನೀಡಬೇಕು, ನ್ಯಾಯಾಧೀಶರ ಸ್ಪರ್ಧಾತ್ಮಕತೆ, ನಡತೆ ಯಾ ಘನತೆಯ ಬಗ್ಗೆ ಯಾವುದೇ ವ್ಯತಿರಿಕ್ತ ಅಭಿಪ್ರಾಯವನ್ನು ಸರಕಾರ ವ್ಯಕ್ತಪಡಿಸಿಲ್ಲ'' ಎಂದು ಸುಪ್ರೀಂ ಕೊರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಅನಿರುದ್ಧ ಬೋಸ್ ಅವರು ಜಾರ್ಖಂಡ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದರೆ, ಎ ಎಸ್ ಬೋಪಣ್ಣ ಗುವಾಹಟಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.
``ಸುಪ್ರೀಂ ಕೋರ್ಟಿನ ನಿಯಮಗಳಂತೆ ಹೈಕೋರ್ಟುಗಳಲ್ಲಿ ನ್ಯಾಯಾಧೀಶರುಗಳ ಜ್ಯೇಷ್ಠತೆ ಹಾಗೂ ಅಖಿಲ ಭಾರತ ಮಟ್ಟದಲ್ಲಿ ಅವರ ಜ್ಯೇಷ್ಠತೆಗೆ ಮಹತ್ವ ನೀಡಬೇಕಾಗಿದೆಯಾದರೂ ಅರ್ಹತೆಗೆ ಅದಕ್ಕಿಂತ ಹೆಚ್ಚು ಮಹತ್ವ ನೀಡಬೇಕಿದೆ ಎಂಬುದು ಕೊಲೀಜಿಯಂ ಅಭಿಪ್ರಾಯವಾಗಿದೆ'' ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೊಲೀಜಿಯಂನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಜಸ್ಟಿಸ್ ಎಸ್ ಎ ಬೊಬ್ಡೆ, ಜಸ್ಟಿಸ್ ಎನ್ ವಿ ರಮಣ, ಜಸ್ಟಿಸ್ ಅರುಣ್ ಮಿಶ್ರ ಹಾಗೂ ಜಸ್ಟಿಸ್ ಆರ್ ಎಫ್ ನಾರಿಮನ್ ಇದ್ದಾರೆ.
ಜಸ್ಟಿಸ್ ಅನಿರುದ್ಧ ಬೋಸ್ ಹಾಗೂ ಎ ಎಸ್ ಬೋಪಣ್ಣ ಅವರ ನೇಮಕಾತಿಗೆ ಕೇಂದ್ರದ ಆಕ್ಷೇಪದ ಹೊರತಾಗಿಯೂ ಇಂದು ಕೊಲಿಜಿಯಂ ಇನ್ನೆರಡು ನ್ಯಾಯಾಧೀಶರುಗಳಾದ ಜಸ್ಟಿಸ್ ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ. ಜಸ್ಟಿಸ್ ಗವಾಯಿ ಅವರು ಬಾಂಬೆ ಹೈಕೋರ್ಟಿನ ನ್ಯಾಯಾಧೀಶರಾಗಿದ್ದರೆ, ಜಸ್ಟಿಸ್ ಕಾಂತ್ ಅವರು ಹಿಮಾಚಲ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.
ಜಸ್ಟಿಸ್ ಗವಾಯಿ ಅವರ ಪದೋನ್ನತಿಯಿಂದಾಗಿ ಸುಪ್ರೀಂ ಕೋಟೀಗೆ ದಶಕದ ನಂತರ ಪರಿಶಿಷ್ಟ ಜಾತಿಗೆ ಸೇರಿದ ನ್ಯಾಯಾಧೀಶರು ದೊರಕಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟಿಗೆ ಒಟ್ಟು 31 ನ್ಯಾಯಾಧೀಶರು ಮಂಜೂರಾಗಿದ್ದರೂ ಸದ್ಯ ಅಲ್ಲಿ 27 ಮಂದಿ ಕಾರ್ಯಾಚರಿಸುತ್ತಿದ್ದಾರೆ.