ವಕೀಲರಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಲೈಂಗಿಕ ಕಿರುಕುಳ ಕಾಯ್ದೆಯ ಪ್ರತಿಗಳ ರವಾನೆ

ಹೊಸದಿಲ್ಲಿ,ಮೇ 9: ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ರಂಜನ್ ಗೊಗೊಯಿ ಅವರನ್ನು ಲೈಂಗಿಕ ಕಿರುಕುಳ ಆರೋಪಗಳಿಂದ ಮುಕ್ತಗೊಳಿಸಿರುವ ಆಂತರಿಕ ವಿಚಾರಣಾ ಸಮಿತಿಯ ನಿರ್ಧಾರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ವಕೀಲರ ಗುಂಪೊಂದು ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ(ತಡೆ,ನಿಷೇಧ ಮತ್ತು ಪರಿಹಾರ) ಕಾಯ್ದೆ,2013ರ ಪ್ರತಿಗಳನ್ನು ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಾಧೀಶರಿಗೆ ರವಾನಿಸುತ್ತಿದೆ.
ಈ ವಕೀಲರು ಆರಂಭಿಸಿರುವ ‘ಮೇ ಇಟ್ ಪ್ಲೀಸ್ ಯುವರ್ ಲಾಡ್ಷಿಪ್’ ಅಭಿಯಾನವು ನ್ಯಾಯಾಧೀಶರು ಇತರರಿಗೆ ಅನ್ವಯಿಸುವ ನಿಯಮಗಳನ್ನೇ ತಮಗೂ ಅನ್ವಯಿಸಿಕೊಳ್ಳಬೇಕು ಎನ್ನುವುದನ್ನು ನೆನಪಿಸುವ ಉದ್ದೇಶವನ್ನು ಹೊಂದಿದೆ. ‘‘ಎಲ್ಲ ಪ್ರಜೆಗಳ ಹಕ್ಕುಗಳ ರಕ್ಷಕ ಮತ್ತು ಸಂವಿಧಾನದ ಅಂತಿಮ ವ್ಯಾಖ್ಯಾನಕಾರ ಪರಮೋಚ್ಚ ಸಂಸ್ಥೆ ಎಂದು ಪರಿಭಾವಿಸಲಾಗಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳಿಂದ ವಿನಾಯಿತಿ ಪಡೆದುಕೊಂಡು ಬಹು ಮುಂದಕ್ಕೆ ಸಾಗಿದ್ದಾರೆ ’’ ಎಂದು ಅಭಿಯಾನದ ಪ್ರವರ್ತಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯವು ವಿಷಯವನ್ನು ನಿರ್ವಹಿಸಿರುವ ರೀತಿಯು ವಿಲಕ್ಷಣವಾಗಿದೆ ಎಂದಿರುವ ಹೇಳಿಕೆಯು, ನ್ಯಾಯಾಲಯವು ಬಹುಶಃ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ(ತಡೆ,ನಿಷೇಧ ಮತ್ತು ಪರಿಹಾರ) ಕಾಯ್ದೆ,2013ರ ಮತ್ತು ವಿಶಾಖಾ ಮಾರ್ಗಸೂಚಿಗಳ ಅನುಷ್ಠಾನದ ಹಿಂದಿನ ಮುಖ್ಯ ಉದ್ದೇಶವನ್ನೇ ಮರೆತಿರಬೇಕು ಎಂದು ತಿಳಿಸಿದೆ.
ಮು.ನ್ಯಾ.ಗೊಗೊಯಿ ಅವರಿಗೆ ಕ್ಲೀನ್ ಚಿಟ್ ನೀಡಿರುವ ನಿರ್ಧಾರದ ವಿರುದ್ಧ ಪ್ರತಿಭಟಿಸುತ್ತಿರುವವರ ವಿರುದ್ಧ ಪೊಲೀಸ್ ಕ್ರಮವನ್ನೂ ಈ ವಕೀಲರ ಗುಂಪು ಟೀಕಿಸಿದೆ. ಪ್ರತಿಭಟನಾಕಾರರ ಧ್ವನಿಯನ್ನಡಗಿಸಲು ಇಡೀ ಸರಕಾರಿ ಯಂತ್ರದ ಅಧಿಕಾರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅದು ಹೇಳಿದೆ. ಗುರುವಾರ ಅಹ್ಮಮದಾಬಾದ್, ಬೆಂಗಳೂರು,ಹೈದರಾಬಾದ್ ಮತ್ತು ಮುಂಬೈಗಳಲ್ಲಿಯೂ ದಿಲ್ಲಿ ಮಾದರಿಯಲ್ಲಿ ಪ್ರತಿಭಟನೆಗಳು ನಡೆದಿವೆ.