ಮೈಸೂರು: ವೈದ್ಯರ ನಿರ್ಲಕ್ಷದಿಂದ ನವಜಾತ ಶಿಶು ಸಾವು ಆರೋಪ; ಪ್ರತಿಭಟನೆ

ಮೈಸೂರು,ಮೇ.9: ಮೈಸೂರಿನ ಚಲುವಾಂಬಾ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಮಗುವಿನ ಕುಟುಂಬಿಕರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ.
ಮೈಸೂರಿನ ಚಲುವಾಂಬಾ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ನಿನ್ನೆ ಬೆಳಿಗ್ಗೆ ಹೆರಿಗೆಗಾಗಿ ಚಲುವಾಂಬ ಆಸ್ಪತ್ರೆಗೆ ಎನ್.ಆರ್. ಮೊಹಲ್ಲಾದ ಗಣೇಶ್ ನಗರದ ನಿವಾಸಿ ಹರೀಶ್ ಎಂಬವರ ಪತ್ನಿ ಲಕ್ಷ್ಮೀ ಎಂಬವರನ್ನು ದಾಖಲಿಸಲಾಗಿತ್ತು. ಇಡೀ ದಿನ ಪೂರ್ತಿ ಲಕ್ಷ್ಮಿ, ಮಗುವಿನ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದರು. ಆದರೆ ಇಂದು ಬೆಳೆಗ್ಗೆ ಏಕಾಏಕಿ ಮಗು ಸತ್ತಿದೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಯ ನಡೆಗೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಗುವಿನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ದೇವರಾಜ ಠಾಣಾ ಪೊಲೀಸರು ಭೇಟಿ ನೀಡಿ ಸಮಾಧಾನಪಡಿಸಿದರು.
Next Story





