ಪ್ರತ್ಯೇಕ ಸಮಿತಿ ರಚಿಸಬೇಕೆಂಬುದು ನನ್ನ ನಿಲುವಾಗಿದೆ: ಅಟಾರ್ನಿ ಜನರಲ್
ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ

ಹೊಸದಿಲ್ಲಿ, ಮೇ 10: ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ವಿಚಾರಣೆ ನಡೆಸಲು ನೇಮಿಸಲಾಗಿರುವ ನ್ಯಾ. ಎಸ್.ಎ ಬೊಬ್ಡೆ ಸಮಿತಿಯ ಕುರಿತ ತನ್ನ ಅನಿಸಿಕೆ ಬಗ್ಗೆ ಸುಪ್ರೀಂಕೋರ್ಟ್ಗೆ ಪತ್ರ ಬರೆದಿರುವುದಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹೇಳಿದ್ದಾರೆ.
ಈಗ ರಚನೆಯಾಗಿರುವ ಸಮಿತಿಗಿಂತ ಭಿನ್ನವಾದ ಸಮಿತಿಯನ್ನು ರಚಿಸಬೇಕೆಂದು ಪತ್ರದಲ್ಲಿ ವಿನಂತಿಸಿದ್ದೇನೆ. ಸಮಿತಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಿದ್ದರೆ ಸದಸ್ಯರಲ್ಲಿ ಹೊರಗಿನ ವ್ಯಕ್ತಿಯೊಬ್ಬರೂ ಇರಬೇಕು ಎಂಬುದು ತನ್ನ ನಿಲುವಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಪತ್ರ ಬರೆದ ಬಳಿಕ ಕೇಂದ್ರ ಸರಕಾರ ಹಾಗೂ ತನ್ನ ಮಧ್ಯೆ ಗಂಭೀರ ಮನಸ್ತಾಪ ಮೂಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಅವರು ತಳ್ಳಿಹಾಕಿದ್ದಾರೆ. ನಿವೃತ್ತ ಮಹಿಳಾ ನ್ಯಾಯಾಧೀಶರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ವೇಣುಗೋಪಾಲ್ ಒತ್ತಾಯಿಸಿದ್ದರು. ಈ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಕೇಂದ್ರ ಸರಕಾರ, ತನ್ನ ಪತ್ರ ವೈಯಕ್ತಿಕವಾಗಿದ್ದು ಇದು ಸರಕಾರದ ನಿಲುವನ್ನು ವ್ಯಕ್ತಪಡಿಸುವುದಿಲ್ಲ ಎಂದು ಹೇಳಿಕೆ ನೀಡುವಂತೆ ವೇಣುಗೋಪಾಲ್ ಮೇಲೆ ಒತ್ತಡ ಹೇರಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಳಿಕ ಸುಪ್ರೀಂಕೋರ್ಟ್ಗೆ ಮತ್ತೊಂದು ಪತ್ರ ಬರೆದಿದ್ದ ವೇಣುಗೋಪಾಲ್, ಪತ್ರದಲ್ಲಿ ತಿಳಿಸಿರುವುದು ತನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ಸರಕಾರ ಮತ್ತು ಎಜಿ ಮಧ್ಯೆ ಪ್ರಮುಖ ವಿಷಯಗಳಲ್ಲಿ ಈ ರೀತಿಯ ಅಭಿಪ್ರಾಯ ಬೇಧಗಳಿರುವ ಹಿನ್ನೆಲೆಯಲ್ಲಿ, ನ್ಯಾಯಶಾಸ್ತ್ರಜ್ಞ ಎಂಬ ತನ್ನ ಘನತೆಯನ್ನು ಉಳಿಸಿಕೊಳ್ಳಲು ಎಜಿ ವೇಣುಗೋಪಾಲ್ ಶೀಘ್ರ ಪದತ್ಯಾಗ ಮಾಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಜೆಐ ಗೊಗೊಯ್ಗೆ ಕ್ಲೀನ್ಚಿಟ್ ನೀಡಿರುವ ನ್ಯಾ. ಬೊಬ್ಡೆ ನೇತೃತ್ವದ ಸಮಿತಿಯಲ್ಲಿ ನ್ಯಾ. ಇಂದು ಮಲ್ಹೋತ್ರಾ ಹಾಗೂ ಇಂದಿರಾ ಬ್ಯಾನರ್ಜಿ ಸದಸ್ಯರಾಗಿದ್ದಾರೆ. ದೂರುದಾರರು ಸಮಿತಿ ಎದುರು ವಿಚಾರಣೆಗೆ ಹಾಜರಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಪರವಾಗಿ ವಕೀಲರೊಬ್ಬರು ವಿಚಾರಣೆಗೆ ಹಾಜರಾಗುವುದನ್ನು ಒಪ್ಪದ ಸಮಿತಿ ಏಕಪಕ್ಷೀಯ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಆದರೆ ಇದನ್ನು ಆಕ್ಷೇಪಿಸಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ದೂರುದಾರ ಮಹಿಳೆ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ ಕಾರಣ ಅವರ ಪ್ರತಿನಿಧಿ ವಕೀಲರಿಗೆ ಅವಕಾಶ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.