ಆಲೂಗಡ್ಡೆ ರೈತರ ವಿರುದ್ಧದ ಎಲ್ಲ ಪ್ರಕರಣಗಳನ್ನು ಹಿಂಪಡೆದ ಪೆಪ್ಸಿ ಕೋ

ಹೊಸದಿಲ್ಲಿ, ಮೇ 11: ಲೇ ಚಿಪ್ಸ್ ಉತ್ಪಾದನೆಗೆ ಬಳಸುವ ಆಲೂಗಡ್ಡೆ ಬೆಳೆಯುವ ಗುಜರಾತ್ನ 9 ರೈತರ ವಿರುದ್ಧ ಸಲ್ಲಿಕೆಯಾಗಿರುವ ಎಲ್ಲ ಪ್ರಕರಣಗಳನ್ನು ಪೆಪ್ಸಿಕೋ ಕಂಪೆನಿ ಹಿಂದಕ್ಕೆ ಪಡೆದಿದೆ. ಎಲ್ಲ ಸಣ್ಣ ರೈತರ ಮೇಲೆ ಪೆಪ್ಸಿಕೋ ಕಂಪೆನಿ ತಲಾ 1.05 ಕೋ.ರೂ.ಪರಿಹಾರ ಮೊತ್ತ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿತ್ತು.
ರೈತ ಸಮುದಾಯ ಹಾಗೂ ಬಹುರಾಷ್ಟ್ರೀಯ ಕಂಪೆನಿ ಮಧ್ಯೆ ನಡೆಯುತ್ತಿರುವ ನ್ಯಾಯಾಂಗ ಹೋರಾಟದ ಚೆಂಡು ಇದೀಗ ರಾಜ್ಯ ಹಾಗೂ ಕೇಂದ್ರ ಸರಕಾರದ ಅಂಗಳಕ್ಕೆ ಸ್ಥಳಾಂತರವಾಗಿದೆ.
ಗುಜರಾತ್ನ ನಾಲ್ವರು ರೈತರ ವಿರುದ್ಧ ಅಹ್ಮದಾಬಾದ್ನ ಕಮರ್ಷಿಯಲ್ ಕೋರ್ಟ್ ಗೆ ಸಲ್ಲಿಸಿದ್ದ ಮೊಕದ್ದಮೆ ಹಾಗೂ ಮೊದಾಸಾ ಜಿಲ್ಲಾ ನ್ಯಾಯಾಲಯದಲ್ಲಿ ಐವರು ರೈತರ ವಿರುದ್ಧ ಸಲ್ಲಿಸಲಾಗಿರುವ ಪ್ರಕರಣಗಳನ್ನು ಪೆಪ್ಸಿಕೋ ಹಿಂದಕ್ಕೆ ಪಡೆದಿದೆ.
‘‘ಸರಕಾರದೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಬೀಜ ಸಂರಕ್ಷಣೆ ವಿಷಯಗಳಿಗೆ ಸಂಬಂಧಿಸಿ ದೀರ್ಘಕಾಲೀನ ಸೌಹಾರ್ದಯುತ ಪರಿಹಾರವನ್ನು ಕಂಪೆನಿ ಬಯಸುತ್ತಿದೆ’’ ಎಂದು ಪೆಪ್ಸಿಕೋ ವಕ್ತಾರ ಹೇಳಿದ್ದಾರೆ.
‘‘ರೈತರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿರುವ ಪೆಪ್ಸಿಕೋ ರೈತರ ಬಳಿ ಕ್ಷಮೆಯಾಚಿಸಬೇಕು. ಇದು ಬೆದರಿಕೆ ಒಡ್ಡುವ ಕ್ರಮವಾಗಿದ್ದು, ರೈತರು ಕಂಪೆನಿಗೆ ಶರಣಾಗುವುದಿಲ್ಲ’’ಎಂದು ನಾಲ್ವರು ರೈತರ ಪರ ವಾದಿಸಿರುವ ವಕೀಲ ಆನಂದ್ ಯಾಗ್ನಿಕ್ ಹೇಳಿದರು.