ಕೋಮು ಘರ್ಷಣೆ ಹಿನ್ನೆಲೆಯಲ್ಲಿ ಅಸ್ಸಾಮಿನ ಹೈಲಕಂಡಿ ಜಿಲ್ಲೆಯಲ್ಲಿ ಕರ್ಫ್ಯೂ ವಿಸ್ತರಣೆ

ಗುವಾಹಟಿ,ಮೇ 12: ಅಸ್ಸಾಮಿನ ಹೈಲಕಂಡಿ ಜಿಲ್ಲೆಯಲ್ಲಿ ಶುಕ್ರವಾರ ಕೋಮು ಘರ್ಷಣೆಗಳು ಸಂಭವಿಸಿ ಓರ್ವ ವ್ಯಕ್ತಿಯು ಕೊಲ್ಲಲ್ಪಟ್ಟ ಹಿನ್ನೆಲೆಯಲ್ಲಿ ಹೇರಲಾಗಿರುವ ಕರ್ಫ್ಯೂವನ್ನು ಸೋಮವಾರ ಬೆಳಿಗ್ಗೆ ಏಳು ಗಂಟೆಯವರೆಗೆ ವಿಸ್ತರಿಸಲಾಗಿದೆ. ಘರ್ಷಣೆಗಳಲ್ಲಿ 14 ಜನರು ಗಾಯಗೊಂಡಿದ್ದಾರೆ.
ರವಿವಾರ ಸೇನೆಯು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಫ್ಲಾಗ್ ಮಾರ್ಚ್ ನಡೆಸಿತು.
ಕಣಿವೆಯಾದ್ಯಂತ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು,ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನನುಸರಿಸಿ ಪುನರಾರಂಭಿಸಲಾಗುವುದು ಎಂದು ಬರಾಕ್ ವ್ಯಾಲಿ ಜಿಲ್ಲಾಧಿಕಾರಿ ಅನ್ವರುದ್ದೀನ್ ಚೌಧರಿ ತಿಳಿಸಿದರು.
ಹಿಂಸಾಚಾರದಲ್ಲಿ ಸಾವನ್ನಪ್ಪಿರುವ ಜಾಷಿಂ ಉದ್ದೀನ್ ಕುಟುಂಬಕ್ಕೆ ಸರಕಾರವು ಐದು ಲ.ರೂ.ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ಪರಿಹಾರವನ್ನು ಬಿಡುಗಡೆಗೊಳಿಸಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಸರಕಾರವು ಭರಿಸಲಿದೆ. ಜಿಲ್ಲೆಯಲ್ಲಿ ಸಹಜ ಸ್ಥಿತಿ ಮರುಕಳಿಸುವಂತೆ ಮಾಡುವುದು ಸರಕಾರ ಮತ್ತು ಜಿಲ್ಲಾಡಳಿತದ ಮುಖ್ಯ ಆದ್ಯತೆಯಾಗಿದೆ ಎಂದು ರಾಜ್ಯ ಅಬಕಾರಿ ಮತ್ತು ಅರಣ್ಯ ಸಚಿವ ಪರಿಮಳ ಶುಕ್ಲಬೈದ್ಯ ತಿಳಿಸಿದರು.
ಘರ್ಷಣೆ ಸಂದರ್ಭ ಪರಿಸ್ಥಿತಿಯ ಸೂಕ್ತ ನಿರ್ವಹಣೆಯ ವೈಫಲ್ಯಕ್ಕಾಗಿ ಎಎಸ್ಐ ಟಿಂಕು ಗೋಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಡಿಜಿಪಿ ಮುಕೇಶ ಅಗರವಾಲ್ ಹೇಳಿದರು.
ತನ್ಮಧ್ಯೆ ಪವಿತ್ರ ರಮಝಾನ್ ಮಾಸದ ಹಿನ್ನೆಲೆಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವಂತೆ ಬಿಜೆಪಿ ರಾಜ್ಯ ಘಟಕ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ನ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಕರೆ ನೀಡಿದ್ದಾರೆ.
ಶುಕ್ರವಾರ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ದುಷ್ಕರ್ಮಿಗಳು ಅವರ ಬೈಕ್ಗಳಿಗೆ ಹಾನಿಯನ್ನುಂಟು ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದ ಬೈಕ್ಗಳ ಮಾಲಕರು ಕ್ರಮವನ್ನು ಕೈಗೊಳ್ಳದಿದ್ದರೆ ರಸ್ತೆಯಲ್ಲೇ ನಮಾಝ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಅವರನ್ನು ತಡೆಯಲು ಇನ್ನೊಂದು ಗುಂಪು ಮುಂದಾದಾಗ ವಾಗ್ವಾದ ನಡೆದು ಘರ್ಷಣೆಗೆ ನಾಂದಿ ಹಾಡಿತ್ತು ಎಂದು ಹೈಲಕಂಡಿ ಎಸ್ಪಿ ಮೊಹನೀಷ ಮಿಶ್ರಾ ತಿಳಿಸಿದರು.