ದೇಶದಲ್ಲಿ ಭ್ರಷ್ಟಾಚಾರ, ಹಗರಣಗಳು ತಾಂಡವವಾಡುತ್ತಿವೆ: ನ್ಯಾ.ಸಂತೋಷ್ ಹೆಗ್ಡೆ

ಮೈಸೂರು,ಮೇ.12: ಪ್ರಸ್ತುತ ದಿನಗಳಲ್ಲಿ ಭ್ರಷ್ಟಾಚಾರ, ಹಗರಣಗಳು ತಾಂಡವಾಡುತ್ತಿವೆ, ಮಾನವರಾಗಿ ಹುಟ್ಟಿ ಮಾನವೀಯತೆಯನ್ನು ಅಳವಡಿಸಿಕೊಂಡು ಮಾನವರಾಗಿ ಸಾಯಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ.ಸಂತೋಷ್ ಹೆಗ್ಡೆ ಹೇಳಿದರು.
ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ರವಿವಾರ ಆಯೋಜಿಸಿದ್ದ 'ಸಚ್ಚಿದಾನಂದ ಶ್ರೀ' ಗುರುವಂದನಾ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶ್ರಮದಲ್ಲಿ ಧರ್ಮದ ಬಗ್ಗೆ ಮಾತ್ರ ಪ್ರಚಾರವಲ್ಲದೇ, ಸಾಹಿತ್ಯ, ಸಂಗೀತ, ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇಂದಿನ ಸಮಾಜದಲ್ಲಿ ಮಕ್ಕಳಿಗೆ ಪೋಷಕರಿಂದ ಆಗಬೇಕಾದ ಕೆಲಸಗಳು ಕಡಿಮೆಯಾಗಿ, ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಮೌಲ್ಯ ಮತ್ತು ಧರ್ಮದ ವಿಷಯಗಳನ್ನು ಮಾತನಾಡುವುದೇ ಇಲ್ಲ ಎಂದರು.
ಹಿರಿಯರು ಸಮಾಜದಲ್ಲಿ ಶಾಂತಿ ಕಾಪಾಡಲು ಹಲವಾರು ಮೌಲ್ಯಗಳನ್ನು ಕಟ್ಟಿ ಕೊಟ್ಟಿದ್ದಾರೆ. ಅದರ ಕುಸಿತದಿಂದಾಗಿ ಮೌಲ್ಯಗಳು ನೆಲಕಚ್ಚಿವೆ. ಇಂದು ಭ್ರಷ್ಟಾಚಾರ, ಹಗರಣಗಳು ತಾಂಡವವಾಡುತ್ತಿವೆ. ಮಾನವರಾಗಿ ಹುಟ್ಟಿ ಮಾನವೀಯತೆಯನ್ನು ಅಳವಡಿಸಿಕೊಂಡು ಮಾನವರಾಗಿ ಸಾಯಬೇಕಿದೆ. ಇಂದಿನ ಯುವ ಪೀಳಿಗೆಗೆ ಸಾಮಾಜಿಕ ಮೌಲ್ಯಗಳನ್ನು ಪುನರ್ ಬಿತ್ತಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ನಂತರ ಮಾತನಾಡಿದ, ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಅವರು, ಕರ್ನಾಟಕದಲ್ಲಿರುವ ಎಲ್ಲಾ ಮಠಗಳು ಧರ್ಮದ ಸಮನ್ವಯತೆಯನ್ನು ಸಾರಬೇಕಿದೆ. ಮಠಾಧೀಶರಲ್ಲಿ ಮೊದಲು ಸಮನ್ವಯತೆ ಆಗಬೇಕು, ಜನಸಾಮಾನ್ಯರಿಂದಲ್ಲ. ಆಶ್ರಮ, ಮಠಗಳು, ಉಗ್ರರನ್ನು, ಆಯುಧಗಳನ್ನು ಭಯೋತ್ಪಾದನೆಯನ್ನು ಸೃಷ್ಟಿಸುವ ಕೇಂದ್ರವಾಗಬಾರದು. ಆಶ್ರಮಗಳಿಂದ ಜ್ಞಾನವನ್ನು ತಲುಪಿಸುವ ಕೆಲಸವಾಗಬೇಕಿದೆ. ಸಂಸ್ಕೃತಿ, ನಾಗರಿಕತೆಯ ಸಂಬಂಧವನ್ನು ಗಟ್ಟಿಗೊಳಿಸಿ, ಪ್ರಿತಿ, ವಿಶ್ವಾಸದಿಂದ ಬದುಕಬೇಕಿದೆ. ಕೃತಿಯು ವರ್ತಮಾನ ಮತ್ತು ಬದುಕಿಗೆ ಬೆಳಕು ಚಲ್ಲುವ ಲೇಖನಗಳನ್ನು ಹೊಂದಿದೆ. ಸಾರ್ವಕಾಲಿಕ ಸಮಥ್ವಾದ ಕೃತಿಯಾಗಿದೆ ಎಂದು ಹೇಳಿದರು.
ದತ್ತ ವಿಜಯನಂದ ತೀರ್ಥಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸಂಸ್ಕೃತ ವಿವಿಯ ಕುಲಪತಿ ಡಾ.ಪದ್ಮಶೇಖರ್, ಡಾ.ಎಚ್.ವಿ.ನಾಗರಾಜರಾವ್, ಚಲನಚಿತ್ರ ಕಲಾವಿದ ಶ್ರೀನಾಥ್, ಪತ್ರಕರ್ತ ಈಶ್ವರ್ ದೈತೋಟ, ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಸಾಹಿತಿ ಡಾ.ಕೆ.ಲೀಲಾಪ್ರಕಾಶ್, ಡಾ.ಜಯಲಕ್ಷ್ಮೀ ಸೀತಾಪುರ, ಎಸ್.ಪ್ರಕಾಶ್ ಬಾಬು, ಪ್ರೊ.ಪಿ.ವಿ.ನಂಜರಾಜ ಅರಸು, ರಘುರಾಂ ವಾಜಪೇಯಿ, ಡಾ.ವೈ.ಡಿ.ರಾಜಣ್ಣ, ಕೆ.ಎಸ್.ನಾಗರಾಜು, ಸಂಪಾದಕ ಸಮಿತಿಯ ಸದಸ್ಯರು ಭಾಗವಹಿಸಿದ್ದರು.







