ಮತ ಚಲಾಯಿಸದ ದಿಗ್ವಿಜಯ್ ಸಿಂಗ್
ಉನಾ (ಹಿಮಾಚಲಪ್ರದೇಶ), ಮೇ 12: ಭೋಪಾಲ ಲೋಕಸಬಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ವಿರುದ್ಧ ರವಿವಾರ ಭೋಪಾಲದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ಇದರಿಂದ ಅವರಿಗೆ ಭೋಪಾಲದಿಂದ 140 ಕಿ.ಮೀ. ದೂರದಲ್ಲಿರುವ ರಾಜಗಢಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗಲಿಲ್ಲ.
ಚುನಾವಣಾ ಫಲಿತಾಂಶದ ಭೀತಿಯಿಂದ ಭೋಪಾಲದ ಹೊರಗೆ ಪ್ರಚಾರ ನಡೆಸುತ್ತಿದ್ದ ದಿಗ್ವಿಜಯ ಸಿಂಗ್ ಮುಖ್ಯಮಂತ್ರಿ ಕಮಲ್ನಾಥ್ ಧೈರ್ಯ ತುಂಬಿದ ಬಳಿಕ ಭೋಪಾಲ ಪ್ರವೇಶಿಸಿದ್ದಾರೆ. ಇದರಿಂದ ಅವರಿಗೆ ಮತದಾನ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ದಿಗ್ವಿಜಯ್ ಸಿಂಗ್ ಈಗ ಭೋಪಾಲದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಅವರು ಮತ ಚಲಾಯಿಸಬೇಕಾಗಿದ್ದ ಸ್ಥಳವಾದ ರಾಜಗಢಕ್ಕೆ ತೆರಳಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ್ ಸಿಂಗ್ ಸಾಧ್ವಿ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಬಿಜೆಪಿಯ ಅಮಿತ್ ಮಾಲವಿಯ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದಿಗ್ವಿಜಯ ಸಿಂಗ್, ನಾನು ಭೋಪಾಲ ದಲ್ಲಿ ಮತದಾನದ ಮೇಲ್ವಿಚಾರಣೆಯಲ್ಲಿ ಬ್ಯುಸಿಯಾಗಿದ್ದೇನೆ. ನಾನು ಭೀತಿಗೊಂಡಿಲ್ಲ. ಮತದಾರರ ಪ್ರತಿಕ್ರಿಯೆ ಉತ್ತಮವಾಗಿದೆ ಎಂದಿದ್ದಾರೆ.