ಕಿನ್ಯಾ ದೇಶದಲ್ಲಿ ಕನ್ನಡ ಸಂಸ್ಕೃತಿಯ ಅನಾವರಣ

ಉಡುಪಿ, ಮೇ 13: ಕಿನ್ಯಾ ದೇಶದಲ್ಲಿರುವ ಭಾರತ ರಾಯಭಾರಿ ಕಚೇರಿ ಯಲ್ಲಿ ಶನಿವಾರ ದಕ್ಷಿಣ ಭಾರತ ರಾಜ್ಯಗಳ ಸಾಂಸ್ಕೃತಿಕ ವಿನಿಮಯ ಹಾಗೂ ಆಹಾರ ಪ್ರದರ್ಶನ ಕಾರ್ಯ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಮೊದಲ ಬಾರಿಗೆ ಭಾರತದ ರಾಯಭಾರಿ ಕಚೇರಿಯಲ್ಲಿ ಆಯೋಜಿಸ ಲಾದ ಈ ಕಾರ್ಯಕ್ರಮದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳು ತಮ್ಮ ನಾಡಿನ ವೈಶಿಷ್ಟತ್ಯಗಳು ಹಾಗೂ ಸಂಸ್ಕೃತಿಯ ಪ್ರದರ್ಶನವನ್ನು ಮಾಡಿದವು. ಕನ್ನಡದ ಸಂಸ್ಕೃತಿಯನ್ನು ಪ್ರದರ್ಶಿಸುವ ಜವಾಬ್ದಾರಿ ಯನ್ನು ಕಿನ್ಯಾದಲ್ಲಿ ನೆಲೆಸಿರುವ ಕಾರ್ಕಳ ಮೂಲದ ಆನೆಕೆರೆ ರಾಜ್ ಕಾಮತ್ ಹಾಗೂ ಯೋಗಿನಿ ಪ್ರಭು ಕಿನ್ಯಾದಲ್ಲಿ ವಹಿಸಿಕೊಂಡಿದ್ದರು.
ಕರ್ನಾಟಕದ ಆಹಾರ ಪ್ರದರ್ಶನದಲ್ಲಿ ಬಿಸಿಬೇಳೆ ಬಾತ್, ಲೆಮೆನ್ ರೈಸ್, ನಿಪ್ಪಟ್ಟು, ಮೊಸರನ್ನ, ಕರಾವಳಿಯ ಖಾದ್ಯಗಳಾದ ನೀರು ದೋಸೆ, ಚಿಕ್ಕನ್ ಕರಿ, ತೆಂಗಿನ ಕಾಯಿ ಹೋಳಿಗೆಯನ್ನು ಸೇರಿದ ಜನ ಸವಿದು ಚಪ್ಪರಿಸಿದರು. ಕನ್ನಡಿಗರು ಮಾತ್ರವಲ್ಲದೇ ನಾನಾ ದೇಶದ ರಾಯಭಾರಿಗಳು ಕೂಡ ಈ ಖಾದ್ಯ ಗಳನ್ನು ಸೇವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ ಕಾಮತ್ ಹಾಡಿದ ಮೇರು ನಟ ಡಾ.ರಾಜ್ ಕುಮಾರ್ರವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಕಿನ್ಯಾದ ಯುವಕರು ಕನ್ನಡ ಧ್ವಜ ಹಿಡದುಕೊಂಡು ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಈ ಮೂಲಕ ಕಿನ್ಯಾ ದೇಶದಲ್ಲಿರುವ ರಾಯಭಾರಿ ಕಚೇರಿಯಲ್ಲಿ ಕನ್ನಡದ ಸಂಸ್ಕೃತಿ ಅನಾವರಣಗೊಂಡಿತು. ನಮ್ಮ ನಾಡಿನ ಸಂಪ್ರ ದಾಯ ಮಣ್ಣಿನ ಸೊಗಡನ್ನು ಕಂಡು ಕಿನ್ಯಾ ದೇಶವಲ್ಲದೇ ಹಲವು ದೇಶಗಳ ಜನ ಕೊಂಡಾಡಿದರು.
ಕಿನ್ಯಾದಲ್ಲಿ ಕನ್ನಡ ಸೇವೆ
ನಾಲ್ಕು ವರುಷಗಳ ಹಿಂದೆ ಉದ್ಯೋಗಕ್ಕಾಗಿ ಕಿನ್ಯಾಕ್ಕೆ ತೆರಳಿದ ಕಾರ್ಕಳದ ಆನೆಕೆರೆಯ ರಾಜ್ ಕಾಮತ್ ಕಿನ್ಯಾದಲ್ಲಿರುವ ಕನ್ನಡಿಗರನ್ನು ಸೇರಿಸಿ ಕನ್ನಡ ಸಾಂಸ್ಕೃತಿಕ ಸಂಘದಲ್ಲಿ ಸಕ್ರಿಯರಾಗಿದ್ದಾರೆ.
ತಾನು ಕೆಲಸ ಮಾಡುವ ಕಂಪನಿಯಲ್ಲಿರುವ ಇತರ ರಾಜ್ಯ, ದೇಶಗಳ ಜನರಿಗೂ ಕನ್ನಡ ಕಲಿಸುವ ಪ್ರಯತ್ನವನ್ನು ಅವರು ಮಾಡುತಿದ್ದಾರೆ. ಅಷ್ಟೇ ಅಲ್ಲದೆ ಕಿನ್ಯಾ ದೇಶದ ಜನರಿಗೆ ಕನ್ನಡ ಕಲಿಸಿ ಕನ್ನಡದಲ್ಲೇ ಮಾತನಾಡಿಸುತ್ತಾರೆ. ಸ್ವತಃ ಗಾಯಕರಾಗಿರುವ ಇವರು ಕಿನ್ಯಾ ಯುವಕರಿಗೆ ರಾಜ್ ಕುಮಾರ್ ಹಾಡು ಗಳನ್ನು ಕಲಿಸಿ, ನೃತ್ಯವನ್ನು ಹೇಳಿಕೊಟ್ಟಿದ್ದಾರೆ.







