ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು ಎಂದ ತಮಿಳುನಾಡು ಸಚಿವ ರಾಜೇಂದ್ರ ಬಾಲಾಜಿ
ರಾಜೇಂದ್ರ ಬಾಲಾಜಿ
ಚೆನ್ನೈ: ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂದು ಹೇಳಿಕೆ ನೀಡಿದ ಎಂಎನ್ಎಂ ಸಂಸ್ಥಾಪಕ ಕಮಲ್ ಹಾಸನ್ ಅವರ ನಾಲಿಗೆ ಕತ್ತರಿಸಬೇಕು ಎಂದು ತಮಿಳುನಾಡಿನ ಸಚಿವ ರಾಜೇಂದ್ರ ಬಾಲಾಜಿ ಹೇಳಿಕೆ ನೀಡಿದ್ದಾರೆ.
ಹಿಂಸೆಯನ್ನು ಬಿತ್ತುತ್ತಿರುವ ಎಂಎನ್ಎಂ ಪಕ್ಷವನ್ನು ನಿಷೇಧಿಸಬೇಕು ಮತ್ತು ಚುನಾವಣಾ ಆಯೋಗದ ಕಾಯ್ದೆ ಅನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಐಎಡಿಎಂಕೆ ಸಚಿವರೂ ಆಗಿರುವ ಅವರು ಆಗ್ರಹಿಸಿದ್ದಾರೆ.
"ಅವರ ನಾಲಿಗೆ ಕತ್ತರಿಸಬೇಕು... ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂದು ಅವರು ಹೇಳಿದ್ದಾರೆ. ಭಯೋತ್ಪಾದನೆಗೆ ಧರ್ಮ ಇಲ್ಲ. ಭಯೋತ್ಪಾದಕ ಹಿಂದೂ ಅಲ್ಲ; ಮುಸ್ಲಿಂ ಅಥವಾ ಕ್ರೈಸ್ತನೂ ಅಲ್ಲ" ಎಂದು ಹೈನುಗಾರಿಕೆ ಅಭಿವೃದ್ಧಿ ಖಾತೆ ಸಚಿವ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅಭಿಪ್ರಾಯಪಟ್ಟರು. ಮುಸ್ಲಿಂ ಮತಗಳನ್ನು ಸೆಳೆಯುವ ಸಲುವಾಗಿ ಕಮಲ್ ಹಾಸನ್ ತಂತ್ರ ಹೂಡಿದ್ದಾರೆ ಎಂದು ಆಪಾದಿಸಿದರು.
ಕೆಲವರನ್ನು ತೃಪ್ತಿಪಡಿಸುವ ಸಲುವಾಗಿ ಕಮಲ್ ಹಾಸನ್ ಹಗೆ ಕಕ್ಕುತ್ತಿದ್ದಾರೆ. ಅವರ ಪಕ್ಷ ಹಿಂಸೆಯನ್ನು ಬಿತ್ತುತ್ತಿದೆ ಎಂದು ಹೇಳಿದರು.