ವಿದ್ಯುತ್ ತಂತಿ ಸ್ಪರ್ಶ: 8 ತಿಂಗಳ ಮಗು ಮೃತ್ಯು
ಬೆಂಗಳೂರು, ಮೇ 14: ವಿದ್ಯುತ್ ತಂತಿ ಸ್ಪರ್ಶದಿಂದಾಗಿ ಎಂಟು ತಿಂಗಳ ಮಗು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಜೀವನ್ ಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಿಹಾರ ಮೂಲದ ಅನಿಲ್ ಮತ್ತು ಸಹಾನಿ ದಂಪತಿಯ ಪುತ್ರ ರವಿಕುಮಾರ್ ಮೃತ ಮಗು ಎಂದು ತಿಳಿದುಬಂದಿದೆ.
ಕಟ್ಟಡ ನಿರ್ಮಾಣ ಕಾರ್ಮಿಕರಾಗಿರುವ ದಂಪತಿ ಎರಡು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದು, ಇಲ್ಲಿನ ಕೋಡಿಹಳ್ಳಿಯ ಕಟ್ಟಡವೊಂದರಲ್ಲಿ ತಾತ್ಕಾಲಿಕ ಶೆಡ್ ಹಾಕಿ, ಇದಕ್ಕೆ ತುಂಡಾಗಿದ್ದ ತಂತಿಗಳನ್ನು ಜೋಡಿಸಿ, ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು ಎನ್ನಲಾಗಿದೆ.
ಸೋಮವಾರ ರಾತ್ರಿ ಆಟವಾಡುತ್ತಿದ್ದ ವೇಳೆ ಮಗು ತಂತಿ ಮುಟ್ಟಿದೆ. ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮಗುವಿಗೆ ಪ್ರಜ್ಞೆ ತಪ್ಪಿಕುಸಿದು ಬಿದ್ದಿದೆ. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ, ದಾರಿ ಮಧ್ಯೆ ಮಗು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.
ಕಟ್ಟಡ ಕಾರ್ಮಿಕರು ಆರು ಮಂದಿ ಇದ್ದರೂ, ಸಣ್ಣದೊಂದು ಶೆಡ್ ನೀಡಿದ ಕಾರಣದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಕಟ್ಟಡದ ಮಾಲಕ ರಾಜು ಗುತ್ತಿಗೆದಾರ ಹರಿ ಹಾಗೂ ಇಂಜಿನಿಯರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಗುವಿನ ಪೋಷಕರು ಒತ್ತಾಯಿಸಿದ್ದಾರೆ.
ಈ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 304ಎ ಆರೋಪದಡಿ ಪೊಲೀಸರು ಮೊಕದ್ದಮೆ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.