ಫಾದರ್ ಮುಲ್ಲರ್ ಮೆಡಿಕಲ್ ‘ಕಾಲೇಜ್ ಕ್ಲಬ್ಸ್’ ಉದ್ಘಾಟನೆ

ಮಂಗಳೂರು, ಮೇ 14: ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ (ಎಫ್ಎಂಸಿಐ) ಹಾಗೂ ಕಾಲೇಜಿನ ಸ್ಟೂಡೆಂಟ್ ಕೌನ್ಸಿಲ್ಗಳ ಸಹಯೋಗದಲ್ಲಿ ಕಾಲೇಜಿನ ನಾಲೆಜ್ ಸೆಂಟರ್ನ ಸಭಾಂಗಣದಲ್ಲಿ ಮಂಗಳವಾರ ಫಾದರ್ ಮುಲ್ಲರ್ ಮೆಡಿಕಲ್ ‘ಕಾಲೇಜ್ ಕ್ಲಬ್ಸ್’ನ್ನು ಎಫ್ಎಂಸಿಐ ನಿರ್ದೇಶಕ ರೆ.ಫಾ.ರಿಚರ್ಡ್ ಅಲೋಸಿಯಸ್ ಕೊಯೆಲ್ಹೊ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿದ್ಯಾರ್ಥಿ ಸಂಶೋಧಕ ಹಾಗೂ ಯುವ ವಿಜ್ಞಾನಿ ಸ್ವಸ್ತಿಕ್ ಪದ್ಮ, ಸಂಶೋಧನೆಗಳಿಗೆ ದೊಡ್ಡ ವಿಷಯಗಳ ಅಗತ್ಯವಿಲ್ಲ. ನನ್ನ 12ನೇ ತರಗತಿಯ ವಿದ್ಯಾಭ್ಯಾಸದ ಅವಧಿಯಲ್ಲಿ ಸಣ್ಣ ಸಣ್ಣ ವಿಷಯಗಳನ್ನು ಇಟ್ಟುಕೊಂಡೇ ಸಂಶೋಧನೆಯಲ್ಲಿ ಭಾಗಿಯಾದೆ. ಗೂಗಲ್, ಯೂಟ್ಯೂಬ್ಗಳೇ ನನ್ನ ಸಂಶೋಧನೆಗೆ ಸಹಕಾರಿಯಾಗಿದ್ದವು ಎಂದು ತಿಳಿಸಿದರು.
ವಿಜ್ಞಾನ ವಿಭಾಗದ ದ್ವಿತೀಯ ವರ್ಷ ವಿದ್ಯಾಭ್ಯಾಸ ಪೂರ್ಣಗೊಂಡಿದೆ. ಇಂಜಿನಿಯರಿಂಗ್ ಕಾಲೇಜು ಶಿಕ್ಷಣ ಪಡೆಯುತ್ತಾ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವೆ. ವೈರ್ರಹಿತ ವಿದ್ಯುತ್ ಸರಬರಾಜು ಕುರಿತು ಸಂಶೋಧನೆ ಮಾಡಲು ಮುಂದಾಗಿದ್ದೇನೆ. ವೈರ್ಗಳ ಮೂಲಕ ಸರಬರಾಜು ಮಾಡುತ್ತಿರುವ ವಿದ್ಯುತ್ ಅಧಿಕ ಪ್ರಮಾಣದಲ್ಲಿ ಪೋಲಾಗುತ್ತಿದೆ. ವಿದ್ಯುತ್ನ ಬೇಡಿಕೆಯ ಇಂದಿನ ದಿನಗಳಲ್ಲಿ ಇಂತಹ ಸಂಶೋಧನೆಗೆ ಮುಂದಾಗಿದ್ದೇನೆ. ನನ್ನ ಮೊದಲ ಪ್ರಯತ್ನದಲ್ಲೇ ಯಶಸ್ಸು ಲಭಿಸುವ ಸಾಧ್ಯತೆಯಿದೆ ಎಂದು ಸ್ವಸ್ತಿಕ್ ಪದ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಮೂಲತಃ ಕೃಷಿಯಿಂದ ಬಂದವನು. ತಂದೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ರೈತರಿಗೆ ಸಹಕಾರಿಯಾಗುವಂತಹ ವಿದ್ಯುತ್ ಇಲ್ಲದೆಯೇ ರೊಮೊಟ್ ಮೂಲಕ ಬಾವಿಯಿಂದ ನೀರನ್ನು ಮೇಲೆತ್ತುವ ವಿಧಾನ ಕಂಡುಕೊಂಡಿದ್ದೇನೆ. ಇದಕ್ಕೆ ಪುತ್ತೂರಿನ ಮೆಕ್ಯಾನಿಕಲ್ ವಿಭಾಗದ ಫ್ರೊಫೆಸರ್ವೊಬ್ಬರ ಸಹಕಾರ ಪಡೆದಿರುವುದಾಗಿ ಅವರು ತಿಳಿಸಿದರು.
ಎಲ್ಲೆಲ್ಲೂ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗುತ್ತಿದ್ದು, ಬಳಸಿದ ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಪ್ಲಾಸ್ಟಿಕ್ನ ಉತ್ಪನ್ನಗಳನ್ನು ಮರುಬಳಕೆಯ ಬಗ್ಗೆ ವಿಚಾರ ಬಂದಿತು. ಪ್ರಾಯೋಗಿಕವಾಗಿ ಪ್ಲಾಸ್ಟಿಕ್, ಮರಳನ್ನು ಬಳಸಿಕೊಂಡು ಕಪ್ಪು ಬಣ್ಣದ ಇಟ್ಟಿಗೆಗಳ ಸಂಶೋಧನೆ ಮಾಡಿದ್ದೇನೆ. ಇದು ಕಾಂಕ್ರಿಟ್ಗಿಂತ 24 ಪಟ್ಟು ಬಲಿಷ್ಠವಾಗಿದೆ. ಈ ಬಗ್ಗೆ ಎನ್ಐಟಿಕೆಯಲ್ಲೂ ಪರೀಕ್ಷೆ ನಡೆಸಲಾಗಿದ್ದು, ಅದು ಯಶಸ್ವಿಯೂ ಆಗಿದೆ ಎಂದು ತಿಳಿಸಿದರು.
ವಿದ್ಯಾಭ್ಯಾಸದ ಜತೆ ಕ್ರೀಡೆಯಲ್ಲಿ ಗುರುತಿಸಿಕೊಳ್ಳುವುದು ಹಲವರ ಉದ್ದೇಶವಾಗಿದ್ದರೆ, ನಾನು ವಿದ್ಯಾಭ್ಯಾಸದ ಜತೆ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದೇನೆ. ವಿದ್ಯಾರ್ಥಿಗಳು ಓದಿ ಓದಿ ರ್ಯಾಂಕ್ ಗಳಿಸುವುಕ್ಕೇ ಕೇಂದ್ರೀಕೃತವಾಗಬಾರದು. ಅದಕ್ಕೂ ಮುಂದುವರಿದು ಉಳಿದವರಿ ಗಿಂತ ವಿಭಿನ್ನವಾಗಿ, ಸಾಧಿಸುವ ಗುರಿಯೊಂದಿಗೆ ನಿರಂತರವಾಗಿ ಪ್ರಯೋಗ ಮಾಡುತ್ತಿರಬೇಕು. ಆಗ ಮಾತ್ರ ಜಗತ್ತಿಗೆ ನಾವೂ ಕೊಡುಗೆ ನೀಡಬಹುದು ಎನ್ನುವುದನ್ನು ತೋರಿಸಿಕೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಜಯಪ್ರಕಾಶ್ ಆಳ್ವ, ಕಾಲೇಜಿನ ಆಡಳಿತಾಧಿಕಾರಿ ರೆ.ಫಾ.ಅಜಿತ್ ಮೆನೆಜೆಸ್, ಫಾ.ರುಡಾಲ್ಫ್ ರವಿ ಡೇಸಾ, ಎಫ್ಎಂಸಿಐ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಸಂಜೀವ್ ರೈ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷೆ ರೋಶನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







