ಬ್ಯಾಂಕ್ ಸಾಲ ವಂಚನೆ ಪ್ರಕರಣ: ಕೋಲ್ಕತ್ತಾದ ಉದ್ಯಮ ಗುಂಪಿನ 483 ಕೋ.ರೂ.ಆಸ್ತಿ ಈ.ಡಿ.ವಶಕ್ಕೆ

ಹೊಸದಿಲ್ಲಿ,ಮೇ 14: ಬಹುಕೋಟಿ ರೂ.ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಮೂಲದ ತಾಯಲ್ ಗ್ರೂಪ್ಗೆ ಸೇರಿದ 483 ಕೋ.ರೂ.ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ(ಈ.ಡಿ)ವು ವಶ ಪಡಿಸಿಕೊಂಡಿದೆ.
ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ(ಪಿಎಂಎಲ್ಎ)ಯಡಿ ತಾಯಲ್ ಗ್ರೂಪ್ ಆಫ್ ಕಂಪನೀಸ್ನ ಅಂಗಸಂಸ್ಥೆ ಮುಂಬೈನ ಕೆಎಸ್ಎಲ್ ಆ್ಯಂಡ್ ಇಂಡಸ್ಟ್ರೀಸ್ ಲಿ.ಗೆ ಸೇರಿದ ನಾಗ್ಪುರದಲ್ಲಿಯ ಒಟ್ಟು 483 ಕೋ.ರೂ.ಮೌಲ್ಯದ ವಾಣಿಜ್ಯ ನಿವೇಶನ ಮತ್ತು ಮಾಲ್ ಅನ್ನು ತಾತ್ಕಾಲಿಕವಾಗಿ ವಶಪಡಿಸಿ ಕೊಂಡಿರುವುದಾಗಿ ಈ.ಡಿ.ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ತಾಯಲ್ ಗ್ರೂಪ್ ಮತ್ತು ಕೆಎಸ್ಎಲ್ ಆ್ಯಂಡ್ ಇಂಡಸ್ಟ್ರೀಸ್ ಲಿ.ಸೇರಿದಂತೆ ಅದರ ನಾಲ್ಕು ಅಂಗಸಂಸ್ಥೆಗಳು 2008ರಲ್ಲಿ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಂಧ್ರ ಬ್ಯಾಂಕ್ಗಳಿಂದ 524 ಕೋ.ರೂ. ಸಾಲ ಪಡೆದುಕೊಂಡು ವಂಚಿಸಿದ್ದವು ಎಂದು ಈ.ಡಿ.ತಿಳಿಸಿದೆ.
ಇದು ಪಿಎಂಎಲ್ಎ ಅಡಿ ತಾಯಲ್ ಗುಂಪಿನ ವಿರುದ್ಧ ಎರಡನೇ ಪ್ರಕರಣವಾಗಿದೆ. ಯುಕೋ ಬ್ಯಾಂಕಿನಿಂದ ಸಾಲವನ್ನು ಪಡೆದುಕೊಂಡ ಪ್ರಕರಣದಲ್ಲಿ ಅದು ಈಗಾಗಲೇ ತನಿಖೆಯನ್ನು ಎದುರಿಸುತ್ತಿದೆ ಮತ್ತು 2016ರಲ್ಲಿ ಅದರ 234 ಕೋ.ರೂ.ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು.