ಇಟಲಿಗೆ ಹೋಗುತ್ತಿದ್ದ ವಿಮಾನದಲ್ಲಿ ಭಾರತೀಯ ಸಾವು: ಅಬುಧಾಬಿಯಲ್ಲಿ ತುರ್ತು ಭೂಸ್ಪರ್ಶ
ಅಬುಧಾಬಿ (ಯುಎಇ), ಮೇ 15: ಹೊಸದಿಲ್ಲಿಯಿಂದ ಇಟಲಿಯ ಮಿಲಾನ್ಗೆ ಹಾರುತ್ತಿದ್ದ ‘ಆಲಿಟಾಲಿಯ’ ಕಂಪೆನಿಯ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬರು ವಿಮಾನದಲ್ಲೇ ಮೃತಪಟ್ಟ ಬಳಿಕ, ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ತುರ್ತು ಭೂಸ್ಪರ್ಶ ನಡೆಸಿದೆ.
ಮೃತ ವ್ಯಕ್ತಿ ರಾಜಸ್ಥಾನದ 52 ವರ್ಷದ ಕೈಲಾಶ್ ಚಂದ್ರ ಸೈನಿ ಎಂಬುದಾಗಿ ಗುರುತಿಸಲಾಗಿದೆ. ಅವರು ತನ್ನ 26 ವರ್ಷದ ಮಗನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.
‘‘ವಿಮಾನವು ಸೋಮವಾರ ರಾತ್ರಿ ಅಬುಧಾಬಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ನಡೆಸಿದೆ. ಮೃತದೇಹವನ್ನು ಮಫ್ರಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ. ಮರಣ ಪ್ರಮಾಣಪತ್ರವನ್ನು ಇಂದು (ಮಂಗಳವಾರ) ನೀಡಲಾಗಿದೆ. ಮೃತದೇಹವನ್ನು ಬುಧವಾರ ಬೆಳಗ್ಗಿನ ಮುನ್ನ ಎತ್ತಿಹಾದ್ ವಿಮಾನವೊಂದರಲ್ಲಿ ಭಾರತಕ್ಕೆ ಕಳುಹಿಸಲಾಗುವುದು’’ ಎಂದು ರಾಯಭಾರ ಕಚೇರಿಯ ಕೌನ್ಸೆಲರ್ ಎಂ. ರಾಜಮುರುಗನ್ ಮಂಗಳವಾರ ತಿಳಿಸಿದರು.