ಕರಾವಳಿ ಕಡಲ ಕಿನಾರೆಯಲ್ಲಿ ಪ್ರತಿಭಾನ್ವೇಷಣೆಗೆ ಸರ್ಫಿಂಗ್
ಮಂಗಳೂರು, ಮೇ 16: ಸರ್ಫಿಂಗ್ ಸ್ವಾಮಿ ಫೌಂಡೇಶನ್, ಮಂತ್ರ ಸರ್ಫ್ ಕ್ಲಬ್, ಅಡ್ವೆಂಚರ್ ವರ್ಕ್ಸ್, ಥಂಡರ್ ಮಂಕಿ, ಫೈಯರ್ವೈರ್ ಸರ್ಫ್ ಬೋರ್ಡ್ ಸಂಘಟನೆಗಳ ನೇತೃತ್ವದಲ್ಲಿ ಯುವ ಸರ್ಫರ್ಗಳನ್ನು ಹುಡುಕಿ ಅವರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2ನೇ ಬಾರಿಗೆ ಕರಾವಳಿಯ ಕಡಲ ಕಿನಾರೆಯಲ್ಲಿ ಮೇ 19ರಂದು ಸಾಹಸಮಯ ಸರ್ಫಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನಗರದ ಮುಲ್ಕಿ, ಪಣಂಬೂರು, ತಣ್ಣೀರುಬಾವಿ, ಬೆಂಗರೆ ಸೇರಿದಂತೆ ಕರಾವಳಿಯ ಕಡಲ ಕಿನಾರೆಗಳಲ್ಲಿ ಕಾರ್ಯಾಚರಿಸುತ್ತಿರುವ ಕ್ಲಬ್ಗಳಿಂದ ಸುಮಾರು 25ಕ್ಕೂ ಹೆಚ್ಚು ಮಕ್ಕಳು ಕಡಲ ಅಲೆಗಳಲ್ಲಿ ಸಾಹಸ ಮಾಡಲಿದ್ದಾರೆ. ಈಗಾಗಲೇ ಸರ್ಫರ್ಗಳು ಕಡಲ ಕಿನಾರೆಗಳಲ್ಲಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
ಕರಾವಳಿಯಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಯುವ ಸರ್ಫರ್ಗಳಿಗೆ ಮುಂದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸರ್ಫಿಂಗ್ ಫೆಸ್ಟ್ಗಳಲ್ಲಿ ಭಾಗವಹಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಆಯೋಜಕರು ವಿಶೇಷ ಮುತುವರ್ಜಿ ವಹಿಸಿ ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸರ್ಫಿಂಗ್ ಸ್ವಾಮಿ ಫೌಂಡೇಶನ್ನ ನಿರ್ದೇಶಕ ಶಮಂತ್ಕುಮಾರ್ ತಿಳಿಸಿದ್ದಾರೆ.
ವಿಶೇಷವೆಂದರೆ ಸರ್ಫಿಂಗ್ ಸ್ವಾಮಿ ಫೌಂಡೇಶನ್ ವತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗಾಗಿ ಉಚಿತ ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೇ 19ರಂದು ಬೆಳಗ್ಗೆ 7ರಿಂದ 11ರವರೆಗೆ ಈ ಸ್ಪರ್ಧೆ ನಡೆಯಲಿದೆ. ಏಳು ವರ್ಷದ ಮಕ್ಕಳಿಂದ ಹಿಡಿದು 15 ವರ್ಷದವರೆಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.
ಯುವ ಸರ್ಫರ್ಗಳನ್ನು ಹುಡುಕಿ ಅವರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಈ ಸ್ಪರ್ಧೆ ನಡೆಯುತ್ತಿದೆ. ವರ್ಷಕ್ಕೆ ಒಂದು ಬಾರಿ ನಡೆಸುತ್ತಿರುವ ಸ್ಪರ್ಧೆಯನ್ನು ಮುಂದಿನ ದಿನಗಳಲ್ಲಿ ಪ್ರತಿವರ್ಷಕ್ಕೆ ಎರಡು-ಮೂರು ಬಾರಿ ಆಯೋಜಿಸಲು ಚಿಂತಿಸಲಾಗಿದೆ.
- ಶಮಂತ್ಕುಮಾರ್,
ಸರ್ಫಿಂಗ್ ಸ್ವಾಮಿ ಫೌಂಡೇಶನ್ನ ನಿರ್ದೇಶಕ