ಚುನಾವಣಾ ಆಯೋಗ ಬಿಜೆಪಿಗೆ ಮಾರಾಟವಾಗಿದೆ: ಮಮತಾ ಬ್ಯಾನರ್ಜಿ
ಮಥುರಾಪುರ, ಮೇ 16: ಚುನಾವಣಾ ಆಯೋಗ ಅದರ ಸಹೋದರ ಬಿಜೆಪಿಗೆ ಮಾರಾಟವಾಗಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
‘‘ನನಗೆ ದುಃಖವಾಗುತ್ತಿದೆ. ಆದರೆ, ನನಗೆ ಇನ್ನೇನೂ ಹೇಳಲು ಇಲ್ಲ. ಇದನ್ನು ಹೇಳಿರುವುದಕ್ಕೆ ಜೈಲಿಗೆ ಹೋಗಲು ಕೂಡ ನಾನು ಸಿದ್ಧ. ನಾನು ಸತ್ಯ ಹೇಳಲು ಹೆದರಲಾರೆ’’ ಎಂದು ಮಮತಾ ಹೇಳಿದ್ದಾರೆ. ಚುನಾವಣಾ ಆಯೋಗ ಪಶ್ಚಿಮಬಂಗಾಳದಲ್ಲಿ 20 ಗಂಟೆ ಮುಂಚಿತವಾಗಿ ಚುನಾವಣಾ ಪ್ರಚಾರ ರದ್ದುಗೊಳಿಸಿದ ಒಂದು ದಿನದ ಬಳಿಕ ಮಮತಾ ಬ್ಯಾನರ್ಜಿ ಈ ಕಟು ಹೇಳಿಕೆ ನೀಡಿದ್ದಾರೆ. ಬುಧವಾರ ಸಂಜೆ ತೃಣಮೂಲ ಪಕ್ಷದ ಕಾರ್ಯಕರ್ತರ ಹಿಂಸಾಚಾರ ನಡೆಸಿರುವುದಾಗಿ ಬಿಜೆಪಿ ದೂರು ನೀಡಿದ ಬಳಿಕ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ನರೇಂದ್ರ ಮೋದಿ ರ್ಯಾಲಿ ಪೂರ್ಣಗೊಳಿಸಿದ ಬಳಿಕ ನಾವು ಯಾವುದೇ ರ್ಯಾಲಿ ನಡೆಸುವುದನ್ನು ಚುನಾವಣಾ ಆಯೋಗ ಬಯಸುತ್ತಿಲ್ಲ ಎಂದಿದ್ದರು.
Next Story