ಬೆಳೆ ವಿಮೆ ಕ್ಲೇಮುಗಳ ತ್ವರಿತ ವಿಲೇವಾರಿ: ಡಿಸಿ ಸೂಚನೆ
ಉಡುಪಿ, ಮೇ 18: ಜಿಲ್ಲೆಯಲ್ಲಿ ಕೃಷಿ ಬೆಳೆ ನಷ್ಟಗೊಂಡು ವಿಮಾ ಪರಿಹಾರ ಕ್ಲೇಮುಗಾಗಿ ಹಾಕಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಪರಿಹಾರ ಪಾವತಿಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಗ್ರ ಕೃಷಿ ಅಭಿಯಾನ 2019-20 ಹಾಗೂ ಪಸಲ್ ಬಿಮಾ ಯೋಜನೆ-ಮುಂಗಾರು ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ರೈತರು ಬೆಳೆ ನಷ್ಟದಿಂದ ವಿಮಾ ಪರಿಹಾರ ಕೋರಿ ಸಲ್ಲಿಸಿರುವ ಕ್ಲೇಮುಗಳಿಗೆ ವಿಮಾ ಕಂಪೆನಿಯು ಆಕ್ಷೇಪಣೆ ಹಾಕಿರುವುದು ಸರಿಯಲ್ಲ. ಕೃಷಿ ಭೂಮಿಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸದೆ ವಿಮಾ ಕಂಪೆನಿಗಳು ಕ್ಲೇಮುಗಳಿಗೆ ಆಕ್ಷೇಪಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವಿಮಾ ಕಂಪೆನಿ ಪ್ರತಿನಿಧಿಗಳು ಕೂಡಲೇ ಕೃಷಿ ಭೂಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕ್ಲೇಮುಗಳನ್ನು ವಿಲೇವಾರಿಗೊಳಿಸಲು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಅವರು ಸಭೆಗೆ ಮಾಹಿತಿ ನೀಡಿ, 2018-19ರಲ್ಲಿ ಜಿಲ್ಲೆಯಲ್ಲಿ 1600 ರೈತರು ಮುಂಗಾರು ಭತ್ತದ ಅವಧಿಯಲ್ಲಿ ಪಸಲ್ ಬಿಮಾ ಯೋಜನೆಯಲ್ಲಿ ನೋಂದಾಯಿಸಿದ್ದು, 3302 ಎಕರೆ ಭೂಮಿ ಯನ್ನು ಇದು ವ್ಯಾಪಿಸಿದೆ. 2018-19ರಲ್ಲಿ 1776 ಅಡಕೆ ಬೆಳೆಗಾರರು ಹಾಗೂ 68 ಕಾಳುಮೆಣಸು ಬೆಳೆಗಾರರು ವಿಮಾ ಯೋಜನೆಗೆ ಹೆಸರು ನೋಂದಾ ಯಿಸಿದ್ದಾರೆ. 2016-17ರಲ್ಲಿ 5202 ಪ್ರಕರಣಗಳಲ್ಲಿ 183.779 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಪ್ರತೀ ಹೆಕ್ಟೇರ್ ಭತ್ತದ ಕೃಷಿಗೆ 1100 ರೂ. ವಿಮಾ ಕಂತು ಹಾಗೂ 55,000ರೂ. ವಿಮಾ ಮೊತ್ತವನ್ನು ನಿಗದಿ ಪಡಿಸಲಾಗಿದೆ ಎಂದರು.
ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ಏರ್ಪಡಿಸಿರುವ ‘ಸಮಗ್ರ ಕೃಷಿ ಅಭಿಯಾನ’ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಾದ್ಯಂತ ಮೇ 27ರಿಂದ ಜೂನ್ 15ರವರೆಗೆ ಏರ್ಪಡಿಸಲಾಗುತ್ತಿದೆ. ಈ ಅಭಿಯಾನದಲ್ಲಿ ರೈತರಿಗೆ ಕೃಷಿ ಮಾಹಿತಿ ನೀಡುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಹಾಗೂ ವಿಜ್ಞಾನಿಗಳು ಮತ್ತು ರೈತರ ನಡುವೆ ಸಂವಾದ ಏರ್ಪಡಿಸುವುದು ಮುಖ್ಯ ಉದ್ದೇಶ. ಕೃಷಿ ವಸ್ತು ಪ್ರದರ್ಶನಗಳನ್ನೂ ಈ ಸಂದರ್ದಲ್ಲಿ ಏರ್ಪಡಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.
ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ಏರ್ಪಡಿಸಿರುವ ‘ಸಮಗ್ರ ಕೃಷಿ ಅಭಿಯಾನ’ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಾದ್ಯಂತ ಮೇ 27ರಿಂದ ಜೂನ್ 15ರವರೆಗೆ ಏರ್ಪಡಿಸಲಾಗುತ್ತಿದೆ. ಈ ಅಭಿಯಾನದಲ್ಲಿ ರೈತರಿಗೆ ಕೃಷಿ ಮಾಹಿತಿ ನೀಡುವುದು, ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಹಾಗೂ ವಿಜ್ಞಾನಿಗಳು ಮತ್ತು ರೈತರ ನಡುವೆ ಸಂವಾದ ಏರ್ಪಡಿಸುವುದು ಮುಖ್ಯ ಉದ್ದೇಶ. ಕೃಷಿ ವಸ್ತುಪ್ರದರ್ಶನಗಳನ್ನೂ ಈ ಸಂದರ್ದಲ್ಲಿ ಏರ್ಪಡಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.
ಕೃಷಿ ಯಂತ್ರಧಾರೆ: ರೈತರಿಗೆ ಅತ್ಯಾಧುನಿಕ ಕೃಷಿ ಉಪಕರಣಗಳನ್ನು ಬಾಡಿಗೆಗೆ ನೀಡಲು ಜಿಲ್ಲೆಯಲ್ಲಿಪ್ರತೀ ಹೋಬಳಿ ಕೇಂದಕ್ಕೊಂದರಂತೆ ಜಿಲ್ಲೆಯಲ್ಲಿ 7 ಕೇಂದ್ರಗಳಿವೆ. ಪ್ರಸಕ್ತ ವರ್ಷ ಉಡುಪಿ ಕಸಬಾ ಹಾಗೂ ವಂಡ್ಸೆ ಹೋಬಳಿ ಗಳಲ್ಲೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು.
ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವ ಎಲ್ಲಾ ಸಲಕರಣೆ, ಯಂತ್ರೋಪಕರಣಗಳನ್ನು ಒದಗಿಸಲು ಅವರು ಸೂಚಿಸಿದರು. ಸಭೆಯಲ್ಲಿ ಕೃಷಿ ಉಪನಿರ್ದೇಶಕ ಚಂದ್ರಶೇಖರ್ ನಾಯಕ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.







