ಬೋಧಕ ಸಿಬ್ಬಂದಿ ಆಯ್ಕೆಯಲ್ಲಿ ಜೆಎನ್ಯು ಶೈಕ್ಷಣಿಕ ಮಂಡಳಿ ಅಂಗೀಕಾರ ಅಗತ್ಯ: ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ, ಮೇ 19: ಉಪ ಕುಲಪತಿ ಜಗದೀಶ್ ಕುಮಾರ್ ಜಾರಿಗೆ ತಂದ ನೂತನ ಸಿಬ್ಬಂದಿ ನೇಮಕಾತಿ ನಿಯಮ ಪ್ರಶ್ನಿಸಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘಟನೆ (ಜೆಎನ್ಯುಟಿಎ) ಪರವಾಗಿ ದಿಲ್ಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ.
2017 ಸೆಪ್ಟಂಬರ್ನಲ್ಲಿ ಕುಮಾರ್ ಅವರು ಎಂ-18 ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ನೂತನ ನೇಮಕಾತಿ ನಿರ್ಧರಿಸುವ ತಜ್ಞರ ಸಮಿತಿಗೆ ಹೆಸರು ಸೇರಿಸುವ ಅಧಿಕಾರ ಪಡೆದುಕೊಂಡಿದ್ದರು. ಇದು ಈ ಹಿಂದಿನ ನೇಮಕಾತಿ ಪ್ರಕ್ರಿಯೆಯನ್ನು ಬದಲಾಯಿಸಿತ್ತು. ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಶೈಕ್ಷಣಿಕ ಮಂಡಳಿಯ ಪಾತ್ರವನ್ನು ದುರ್ಬಲಗೊಳಿಸಿತ್ತು.
ಈ ಬಗ್ಗೆ ತೀರ್ಪು ನೀಡಿದ ನ್ಯಾಯಮೂರ್ತಿ ಸಿ. ಹರಿಶಂಕರ್, ಸಮಿತಿಯಲ್ಲಿ ಉಪಕುಲಪತಿ ಸೇರಿಸಿದ ಹೆಸರು ಹಾಗೂ ಇತರ ಹೆಸರಿಗೆ ಶೈಕ್ಷಣಿಕ ಮಂಡಳಿ ಶಿಫಾರಸು ನೀಡಬೇಕು. ಅನಂತರ ಕಾರ್ಯಕಾರಿ ಮಂಡಳಿ ಅಂಗೀಕಾರ ನೀಡಬೇಕು. ಅನಂತರವಷ್ಟೇ ಈ ಸಮಿತಿ ಬೋಧಕ ಸಿಬ್ಬಂದಿಯನ್ನು ಆಯ್ಕೆ ಮಾಡಬಹುದು ಎಂದು ಹೇಳಿದ್ದಾರೆ.
ಉಚ್ಚ ನ್ಯಾಯಾಲಯದ ತೀರ್ಪನ್ನು ಜೆಎನ್ಯುಟಿಎ ಸ್ವಾಗತಿಸಿದೆ.