ಬೈಕ್ಗೆ ಲಾರಿ ಢಿಕ್ಕಿ: ಕೂಲಿ ಕಾರ್ಮಿಕರಿಬ್ಬರು ಮೃತ್ಯು
ಚಿಕ್ಕಮಗಳೂರು, ಮೇ 25: ಲಾರಿಯೊಂದು ಬೈಕ್ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಗರದ ಹೊರವಲಯದಲ್ಲಿರುವ ಕದ್ರಿಮಿದ್ರಿ ಎಂಬಲ್ಲಿ ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರರಿಬ್ಬರನ್ನು ಮಹೇಶ್(42) ಲೋಕೇಶ್(40) ಎಂದು ಗುರುತಿಸಲಾಗಿದೆ. ಇವರಿಬ್ಬರು ಗಾರೆ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಕದ್ರಮಿದ್ರಿ ಬಡಾವಣೆಯ ನಿವಾಸಿಗಳೆಂದು ತಿಳಿದು ಬಂದಿದೆ.
ಮಹೇಶ್ ಮತ್ತು ಲೋಕೇಶ್ ಶನಿವಾರ ಬೆಳಗ್ಗೆ ಬೈಕ್ನಲ್ಲಿ ಕದ್ರಿಮಿದ್ರಿ ಸಮೀಪದ ಗೆಂಡೇಹಳ್ಳಿ ಗ್ರಾಮಕ್ಕೆ ಗಾರೆ ಕೆಲಸದ ನಿಮಿತ್ತ ಹೊರಟಿದ್ದರು. ಇವರು ಕದ್ರಮಿದ್ರಿ ಬಡಾವಣೆ ರಸ್ತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ತಿರುವಿನಲ್ಲಿ ಬೈಕ್ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗುರುಳಿದ್ದಾರೆ. ಬಿದ್ದ ರಭಸಕ್ಕೆ ಸವಾರರಿಬ್ಬರ ತಲೆಗೆ ತೀವ್ರ ಹೊಡೆತ ಬಿದ್ದ ಪರಿಣಾಮ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.