ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಸಾರ್ಕ್ ನಾಯಕರು ?

ಹೊಸದಿಲ್ಲಿ: ಇದುವರೆಗೆ ಅಧಿಕೃತ ಆಹ್ವಾನ ನೀಡದಿದ್ದರೂ, ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನೆರೆ ರಾಷ್ಟ್ರಗಳ ಮುಖಂಡರನ್ನು ಮತ್ತು ಇತರ ವಿದೇಶಿ ಗಣ್ಯರನ್ನು ಆಹ್ವಾನಿಸುವ ಪ್ರಸ್ತಾವವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.
ನೆರೆರಾಷ್ಟ್ರಗಳು ಮೊದಲು ಎಂಬ ನೀತಿಗೆ ಒತ್ತು ನೀಡುವ ಸಲುವಾಗಿ ಮೋದಿಯವರು ಮೇ 30ರಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲು ನೆರೆಯ ರಾಷ್ಟ್ರವೊಂದಕ್ಕೆ ಭೇಟಿ ನೀಡುತ್ತಾರೆ ಎಂದೂ ಹೇಳಲಾಗಿದೆ.
"ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಂಬಂಧಿಸಿದಂತೆ ನಾವು ಭಾರತೀಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದರೆ ಭಾರತ ಸರ್ಕಾರ ಕಾರ್ಯಕ್ರಮ ಅಂತಿಮ ಪಡಿಸಿ ಅಧಿಕೃತ ಆಹ್ವಾನ ನೀಡಿದ ಬಳಿಕ ದೇಶದ ಮುಖ್ಯಸ್ಥರ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸಲಾಗುತ್ತಿದೆ" ಎಂದು ಮೂರು ಸಾರ್ಕ್ ರಾಷ್ಟ್ರಗಳ ರಾಜತಾಂತ್ರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲೂ ಮೋದಿ ಅಂದಿನ ಪಾಕಿಸ್ತಾನಿ ಪ್ರಧಾನಿ ನವಾಝ್ ಷರೀಫ್ ಸೇರಿದಂತೆ ಎಲ್ಲ ಸಾರ್ಕ್ ಮುಖಂಡರನ್ನು ಆಹ್ವಾನಿಸಿದ್ದರು. ಈ ಬಾರಿ ಸಾರ್ಕ್ ನಾಯಕರನ್ನು ಆಹ್ವಾನಿಸುವುದಾದಲ್ಲಿ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅತಿಥಿಗಳ ಪಟ್ಟಿಯಲ್ಲಿ ಸೇರಿಸಬೇಕೇ ಅಥವಾ ಬೇಡವೇ ಎಂಬ ಗೊಂದಲ ಇರುವುದರಿಂದ ಆಹ್ವಾನ ನೀಡುವುದು ವಿಳಂಬವಾಗುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ. ಖಾನ್ ಅವರನ್ನು ಆಹ್ವಾನಿಸುವ ಸಾಧ್ಯತೆ ವಿರಳ ಎಂದು ಮೂಲಗಳು ದೃಢಪಡಿಸಿವೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಪ್ರಮಾಣ ವಚನಕ್ಕೆ ಹಾಜರಾಗುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ.