ಎಸ್ಸೆಂ ಕೃಷ್ಣ ನಿವಾಸದಲ್ಲಿ ವಿಪಕ್ಷ ನಾಯಕ ಬಿಎಸ್ವೈ ಜೊತೆ ಕಾಂಗ್ರೆಸ್ ಶಾಸಕರು !

ಬೆಂಗಳೂರು, ಮೇ 26: ಮಾಜಿ ಸಿಎಂ ಎಸ್ಸೆಂ ಕೃಷ್ಣ ಅವರ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ, ಮಂಡ್ಯ ಕ್ಷೇತ್ರದ ನೂತನ ಸಂಸದೆ ಸುಮಲತಾ, ಬಂಡಾಯ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಸುಧಾಕರ್, ಎಸ್ಸೆಂ ಕೃಷ್ಣರನ್ನು ಭೇಟಿ ಮಾಡಿ ಚರ್ಚಿಸಿರುವುದು ತೀವ್ರ ಕುತೂಹಲಕ್ಕೆ ಮೂಡಿಸಿದೆ.
‘ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಕಾರಣಕ್ಕೆ ಧನ್ಯವಾದ ತಿಳಿಸಲು ಬಂದಿದ್ದೆ’ ಎಂದು ಮಂಡ್ಯ ಕ್ಷೇತ್ರದ ನೂತನ ಸಂಸದೆ ಸುಮಲತಾ ಹೇಳಿದ್ದಾರೆ. ‘ಆರೋಗ್ಯ ವಿಚಾರಿಸಲು ಬಂದಿದ್ದೆ’ ಎಂದು ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಶಾಸಕ ಡಾ.ಸುಧಾಕರ್ ‘ಕೃಷ್ಣ ಅವರು ನನ್ನ ರಾಜಕೀಯ ಗುರುಗಳು, ಹೀಗಾಗಿ ಅವರನ್ನು ಭೇಟಿ ಮಾಡಿದ್ದೇನೆ’ ಎಂದು ವಿವರಿಸಿದ್ದಾರೆ.
ಅಲ್ಲದೇ, ಬಿಜೆಪಿಯ ಆರ್.ಅಶೋಕ್, ‘ಎಸ್ಸೆಂ ಕೃಷ್ಣ ಅವರ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರವಲ್ಲ. ಅವರ ಅಭಿಮಾನಿಗಳಾದ ರಮೇಶ್ ಜಾರಕಿಹೊಳಿ, ಡಾ.ಸುಧಾಕರ್ ಬಂದಿದ್ದರು. ಇದೇ ವೇಳೆ ನೂತನ ಸಂಸದೆ ಸುಮಲತಾ ಅವರು ಆಗಮಿಸಿದ್ದರು. ನಾವೂ ಅದೇ ಸಮಯಕ್ಕೆ ಬಂದಿದ್ದು, ಇದೊಂದು ಆಕಸ್ಮಿಕ ಭೇಟಿ ಅಷ್ಟೆ’ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ಪ್ರಸ್ತಾವ: ‘ಕೊಡುವುದಾದರೆ ನಾನೊಬ್ಬನೆ ರಾಜೀನಾಮೆ ಕೊಡುವುದಿಲ್ಲ. ನಮ್ಮದೊಂದು ತಂಡವಿದ್ದು, ಎಲ್ಲರೂ ಸೇರಿ ಒಟ್ಟಾಗಿಯೇ ರಾಜೀನಾಮೆ ಕೊಡುತ್ತೇವೆ’ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.
ರವಿವಾರ ಬೆಳಗ್ಗೆ ಕೃಷ್ಣ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾನೂ ರಾಜೀನಾಮೆ ಕೊಡುವುದಾಗಿ ಎಲ್ಲೂ ಹೇಳಿಲ್ಲ. ಸದ್ಯಕ್ಕೆ ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೃಷ್ಣ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ರಾಜೀನಾಮೆ ನೀಡುವುದಾದರೆ ಮಾಧ್ಯಮದವರಿಗೆ ಹೇಳಿಯೆ ಕೊಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಅನಿರೀಕ್ಷಿತ ಭೇಟಿ: ಕೃಷ್ಣ ಅವರು ನನ್ನ ರಾಜಕೀಯ ಗುರುಗಳು, ಅವರು ನನ್ನ ತಂದೆ ಸಮಾನ. ನನ್ನ ಮನೆಗೆ ರಮೇಶ್ ಆಗಮಿಸಿದ್ದರು. ನಾನು ಕೃಷ್ಣ ಅವರ ಮನೆಗೆ ತೆರಳುತ್ತಿದ್ದೇನೆ ಎಂದೆ, ಅವರು ನಾನೂ ಬರುತ್ತೇನೆ ಎಂದರೂ ಇಬ್ಬರು ಒಟ್ಟಿಗೆ ಆಗಮಿಸಿದ್ದೇವೆ ಅಷ್ಟೇ ಎಂದು ಶಾಸಕ ಡಾ.ಸುಧಾಕರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಯಡಿಯೂರಪ್ಪ, ಸಂಸದೆ ಸುಮಲತಾ ಆಗಮಿಸಿದ್ದು, ಇದೊಂದು ಅನಿರೀಕ್ಷಿತ ಭೇಟಿ ಅಷ್ಟೇ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ. ನಾನು ಸಹಜವಾಗಿಯೇ ತಿಂಗಳಿಗೊಮ್ಮೆ ಕೃಷ್ಣ ಅವರನ್ನು ಭೇಟಿ ಮಾಡುತ್ತಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಎಲ್ಲರಿಗೂ ಧನ್ಯವಾದ ಅರ್ಪಿಸುವೆ: ಮಂಡ್ಯದಲ್ಲಿ ನಡೆದ ಚುನಾವಣೆ ಕೇವಲ ಒಂದು ಪಕ್ಷದ್ದಲ್ಲ. ನಾನು ಎಲ್ಲ ಪಕ್ಷದ ಅಭ್ಯರ್ಥಿಯಾಗಿದ್ದೆ. ಬಿಜೆಪಿ, ಕಾಂಗ್ರೆಸ್ ಬಂಡಾಯ ಕಾರ್ಯಕರ್ತರು ನನ್ನ ಪರ ಕೆಲಸ ಮಾಡಿದ್ದು, ಎಲ್ಲರಿಗೂ ಧನ್ಯವಾದ ಅರ್ಪಿಸುವುದು ನನ್ನ ಕರ್ತವ್ಯ ಎಂದು ಸಂಸದೆ ಸುಮಲತಾ ತಿಳಿಸಿದರು.
ಕೇಂದ್ರ ಸರಕಾರ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೂ ಸಹಕಾರ ನೀಡಲಿದೆ ಎಂಬ ಭರವಸೆ ಇದೆ. ಮಂಡ್ಯ ರೈತರಿಗೆ ನೀರು ಹರಿಸುವುದು ಎಲ್ಲರ ಕರ್ತವ್ಯ. ಯಾರೋ ಹೇಳಿದರೂ ಎಂದು ನಾನು ಕೆಲಸ ಮಾಡಬೇಕಿಲ್ಲ. ಜಿಲ್ಲೆಯ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ವಿಷಯಾಧಾರಿತ ಬೆಂಬಲ ನೀಡಲು ಪಕ್ಷೇತರ ಸದಸ್ಯೆಯಾದ ನನಗೆ ಅವಕಾಶವಿದೆ. ಮಂಡ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲೆಯ ಜನರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಇಡುತ್ತೇನೆ’
-ಸುಮಲತಾ ಅಂಬರೀಶ್, ಮಂಡ್ಯ ಸಂಸದೆ








