ವಧುವಿಗೆ ತಾಳಿಕಟ್ಟಿದ ವರನ ಸಹೋದರಿ: ಕಾರಣವೇನು ಗೊತ್ತೇ ?

ಸಾಂದರ್ಭಿಕ ಚಿತ್ರ
ಜೈಪುರ, ಮೇ 26: ಗುಜರಾತ್ನ ಮೂರು ಬುಡಕಟ್ಟು ಗ್ರಾಮಗಳಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಇಲ್ಲಿ ಮದುಮಗನ ಅನುಪಸ್ಥಿತಿಯಲ್ಲಿಯೇ ಮದುವೆ ನಡೆಯುತ್ತದೆ. ವರನ ಅವಿವಾಹಿತ ಸಹೋದರಿ ಅಥವಾ ಆತನ ಕುಟುಂಬದಲ್ಲಿರುವ ಅವಿವಾಹಿತ ಮಹಿಳೆಯರು ವರನ ಪ್ರತಿನಿಧಿಯಾಗಿ ವಿವಾಹ ಮಂಟಪದಲ್ಲಿ ವಧುವಿಗೆ ತಾಳಿ ಕಟ್ಟಿ ಹಾರ ಹಾಕುತ್ತಾರೆ.
ಸುರ್ಖೇಡ, ಸನಾದ ಮತ್ತು ಅಂಬಾಲ್ ಗ್ರಾಮದ ಆದಿವಾಸಿಗಳಲ್ಲಿ ಈ ಸಂಪ್ರದಾಯ ಪ್ರಚಲಿತದಲ್ಲಿದೆ. ಈ ಊರುಗಳ ಗ್ರಾಮ ದೇವರು ಅವಿವಾಹಿತರು. ಆದ್ದರಿಂದ ದೇವರಿಗೆ ಗೌರವ ಸೂಚಕವಾಗಿ ಮದುವೆ ದಿನದಂದು ವರನನ್ನು ಮನೆಯಲ್ಲಿಯೇ ಇರಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ವರನಿಗೆ ವೈವಾಹಿಕ ಬದುಕಿನಲ್ಲಿ ಯಾವುದೇ ತೊಂದರೆ, ಸಮಸ್ಯೆ ಇದಿರಾಗದು ಎಂಬ ನಂಬಿಕೆ ಇವರದ್ದಾಗಿದೆ.
ಮದುವೆ ದಿನದಂದು ವರ ಶೆರ್ವಾನಿ ಧರಿಸಿ ತಲೆ ಮೇಲೆ ಪೇಟ ತೊಟ್ಟು ಸಾಂಪ್ರದಾಯಿಕ ಖಡ್ಗವನ್ನು ಕೈಯಲ್ಲಿ ಹಿಡಿದುಕೊಂಡು ಸಿದ್ಧನಾಗುತ್ತಾನೆ. ಆದರೆ ಆತ ವಿವಾಹ ಮಂಟಪಕ್ಕೆ ಹೋಗುವಂತಿಲ್ಲ. ಮನೆಯಲ್ಲಿಯೇ ಆತ ತನ್ನ ತಾಯಿಯೊಂದಿಗೆ ಇರಬೇಕು. ವರನ ಅವಿವಾಹಿತ ಸಹೋದರಿ ಮದುವೆ ದಿಬ್ಬಣದಲ್ಲಿ ತೆರಳಿ ಅಲ್ಲಿ ವರನ ಪ್ರತಿನಿಧಿಯಾಗಿ ವಧುವನ್ನು ವಿವಾಹವಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಬರುತ್ತಾಳೆ.
ಸಪ್ತ ಪದಿ ತುಳಿಯುವುದೂ ಸೇರಿದಂತೆ ಸಾಂಪ್ರದಾಯಿಕವಾಗಿ ನಡೆಯುವ ವಿವಾಹ ಶಾಸ್ತ್ರವನ್ನು ವರನ ಸಹೋದರಿಯೇ ನಿರ್ವಹಿಸುತ್ತಾಳೆ. ಈ ಸಂಪ್ರದಾಯವನ್ನು ಉಲ್ಲಂಘಿಸಿದ ಹಲವರಿಗೆ ಹಲವಾರು ಸಂಕಷ್ಟಗಳು ಎದುರಾಗಿವೆ. ಮೂರು ಹಳ್ಳಿಗಳಲ್ಲಿ ಇಂದಿಗೂ ಈ ಆಚರಣೆ ಚಾಲ್ತಿಯಲ್ಲಿದೆ. ಇದನ್ನು ಮೀರಿದರೆ ತೊಂದರೆ ಉಂಟಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ . ಇದನ್ನು ಮೀರಿದ ಕೆಲವು ವ್ಯಕ್ತಿಗಳ ವೈವಾಹಿಕ ಬದುಕಿನಲ್ಲಿ ಸಮಸ್ಯೆ ಕಂಡುಬಂದು ವಿಚ್ಛೇದನದಲ್ಲಿ ಕೊನೆಗೊಂಡಿದೆ ಎಂದು ಸುರ್ಕೇಡ ಗ್ರಾಮದ ಅಧ್ಯಕ್ಷ ರಾಮ್ಸಿಂಗ್ಬಾಯ್ ರಥ್ವ ಹೇಳಿದ್ದಾರೆ.