ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ: ಕ್ರಿಯಾ ಯೋಜನೆ ಸಲ್ಲಿಸಿರದ 25ಕ್ಕೂ ಹೆಚ್ಚು ರಾಜ್ಯಗಳಿಗೆ ಒಂದು ಕೋ.ರೂ.ದಂಡ ಸಾಧ್ಯತೆ
ಹೊಸದಿಲ್ಲಿ, ಮೇ 23: ಪ್ಲಾಸ್ಟಿಕ್ ತ್ಯಾಜ್ಯದ ವ್ಯವಸ್ಥಿತ ವಿಲೇವಾರಿ ಕುರಿತು ತಮ್ಮ ಕ್ರಿಯಾ ಯೋಜನೆಗಳನ್ನು ನಿಗದಿತ ಗಡುವಿನೊಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಗೆ ಸಲ್ಲಿಸದ್ದಕ್ಕಾಗಿ 25ಕ್ಕೂ ಅಧಿಕ ರಾಜ್ಯ ಸರಕಾರಗಳು ತಲಾ ಒಂದು ಕೋ.ರೂ.ಗಳ ಪರಿಸರ ಪರಿಹಾರವನ್ನು ಪಾವತಿಸಬೇಕಾಗಬಹುದು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಕ್ರಿಯಾ ಯೋಜನೆಗಳನ್ನು ಸಲ್ಲಿಸಲು ಎ.30ರ ಗಡುವನ್ನು ವಿಧಿಸಿತ್ತು.
ಎನ್ಜಿಟಿಯ ಆದೇಶದಂತೆ ರಾಜ್ಯಗಳು ಪ್ರತಿ ವರ್ಷ ಎ.30ರೊಳಗೆ ಕ್ರಿಯಾ ಯೋಜನೆಗಳನ್ನು ಸಿಪಿಸಿಬಿಗೆ ಸಲ್ಲಿಸಬೇಕು. ಇದರಲ್ಲಿ ವಿಫಲಗೊಂಡರೆ ಪ್ರತಿ ತಿಂಗಳಿಗೆ ಒಂದು ಕೋ.ರೂ.ನಂತೆ ಸಿಪಿಸಿಬಿಗೆ ದಂಡವನ್ನು ಪಾವತಿಸಬೇಕಾಗುತ್ತದೆ.
ರಾಜ್ಯಗಳು ನಮ್ಮ ಆದೇಶಗಳನ್ನು ಪಾಲಿಸಿರಲಿಲ್ಲ,ಹೀಗಾಗಿ ನಾವು ಎನ್ಜಿಟಿ ಮೊರೆ ಹೋಗಿದ್ದೆವು. ಈಗ ಅವು ಎನ್ಜಿಟಿ ಆದೇಶವನ್ನೂ ಉಲ್ಲಂಘಿಸುತ್ತಿವೆ ಮತ್ತು ಅದಕ್ಕಾಗಿ ಅವು ಬೆಲೆಯನ್ನು ತೆರಬೇಕಿದೆ ಎಂದು ಸಿಪಿಸಿಬಿಯ ಮಾಜಿ ಹೆಚ್ಚುವರಿ ನಿರ್ದೇಶಕ ಹಾಗೂ ತಪ್ಪಿತಸ್ಥ ರಾಜ್ಯಗಳ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದ ಎಸ್.ಕೆ.ನಿಗಮ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಆದೇಶದ ಉಲ್ಲಂಘನೆಗೆ ಕೇವಲ ದಂಡ ಹೇರಿಕೆ ಮಾತ್ರವಲ್ಲ,ಕೆಲವು ಪ್ರಕರಣಗಳಲ್ಲಿ ಜೈಲುಶಿಕ್ಷೆಯನ್ನೂ ವಿಧಿಸಲಾಗುತ್ತದೆ.
ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪರಿಸ್ಥಿತಿ ಹದಗೆಟ್ಟಿದೆ. ಮಹಾನಗರ ಪಾಲಿಕೆಗಳ ಆದ್ಯತೆಗಳಲ್ಲಿ ತ್ಯಾಜ್ಯ ನಿರ್ವಹಣೆಯು ಕೊನೆಯ ಸ್ಥಾನದಲ್ಲಿದೆ. ಆದೇಶ ಪಾಲಿಸದಿರುವ ಬಗ್ಗೆ ಸಿಪಿಸಿಬಿಯು ಈಗ ಎನ್ಜಿಟಿಗೆ ಮಾಹಿತಿಗಳನ್ನು ನೀಡಲಿದೆ ಮತ್ತು ತಪ್ಪಿಗಾಗಿ ರಾಜ್ಯ ಸರಕಾರಗಳು ಭಾರೀ ದಂಡವನ್ನು ತೆರುವಂತೆ ಮಾಡಲಿದೆ ಎಂದರು.
ಆಂಧ್ರಪ್ರದೇಶ,ಪುದುಚೇರಿ,ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿದರೆ ಇತರ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕ್ರಿಯಾ ಯೋಜನೆಗಳನ್ನು ಸಲ್ಲಿಸಲು ವಿಫಲಗೊಂಡಿವೆ.