ದಾಭೋಲ್ಕರ್, ಗೌರಿ ಹತ್ಯೆಗೆ ಬಳಸಿದ್ದ ಗನ್ ಗಳನ್ನು ನಾಶಗೈಯ್ಯಲು ಸಹಾಯ ಮಾಡಿದ್ದ ಸನಾತನ ಸಂಸ್ಥಾ ವಕೀಲ
ರಿಮಾಂಡ್ ಅರ್ಜಿಯಲ್ಲಿ ಸಿಬಿಐ

ಸಂಜೀವ್ ಪುನಲೇಕರ್
ಹೊಸದಿಲ್ಲಿ, ಮೇ 27: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಬಳಸಿದ್ದ ಆಯುಧಗಳನ್ನು ನಾಶಗೈಯಲು ಇತ್ತೀಚೆಗೆ ಬಂಧಿತನಾಗಿರುವ ಸನಾತನ ಸಂಸ್ಥಾದ ವಕೀಲ ಸಂಜೀವ್ ಪುನಲೇಕರ್ ಸಹಾಯ ಮಾಡಿದ್ದನೆಂದು ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹೇಳಿದೆ.
ಸಂಜೀವ್ ಕಚೇರಿಗೆ ಶಂಕಿತ ಹಂತಕ ಶರದ್ ಕಲಸ್ಕರ್ ಜೂನ್ 2018ರಲ್ಲಿ ಭೇಟಿ ನೀಡಿದ್ದ ಎಂದು ಸಂಜೀವ್ ಮತ್ತಾತನ ಸಹವರ್ತಿ ವಿಕ್ರಮ್ ಭಾವೆ ಅವರ ಕಸ್ಟಡಿ ಕೋರಿ ಸಿಬಿಐ ಪುಣೆ ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಹೇಳಿದೆ.
ಸಿಬಿಐಯಿಂದ ಈ ಹಿಂದೆಯೇ ಬಂಧನಕ್ಕೊಳಗಾಗಿರುವ ಕಲಸ್ಕರ್ ವಿಚಾರಣೆ ವೇಳೆ ದಾಭೋಲ್ಕರ್ ಹತ್ಯೆಯಲ್ಲಿ ಸಂಜಯ್ ಪಾತ್ರವನ್ನು ಒಪ್ಪಿಕೊಂಡಿದ್ದನಲ್ಲದೆ ಭಾವೆ ಕೂಡ ಅದೇ ಕಚೇರಿಯಲ್ಲಿದ್ದನೆಂದು ತಿಳಿಸಿದ್ದ.
“ಗೌರಿ ಲಂಕೇಶ್ ಹತ್ಯೆಗೆ ಬಳಸಲಾದ ಪಿಸ್ತೂಲನ್ನು ನಾಶಗೊಳಿಸುವಂತೆ ಶರದ್ ಕಲಸ್ಕರ್ ಗೆ ಸಂಜೀವ್ ಹೇಳಿದ್ದ. ಅಂತೆಯೇ ಜುಲೈ 23, 2018ರಂದು ಶರದ್ 4 ದೇಶೀಯ ನಿರ್ಮಿತ ಪಿಸ್ತೂಲುಗಳನ್ನು ತುಂಡು ಮಾಡಿ ಥಾಣೆಯ ಸೇತುವೆಯಿಂದ ಎಸೆದಿದ್ದ'' ಎಂದು ಸಿಬಿಐ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಹೇಳಲಾಗಿದೆ.
ದಾಭೋಲ್ಕರ್ ಅವರನ್ನು ಪುಣೆಯ ಓಂಕಾರೇಶ್ವರ ಸೇತುವೆಯಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲಾದ ಸ್ಥಳಕ್ಕೆ ಘಟನೆ ನಡೆಯವ ಮೊದಲೇ ಆಗಮಿಸಿ ಸ್ಥಳವನ್ನು ಪರಿಶೀಲಿಸುವ ಸಂದರ್ಭ ಕಲಸ್ಕರ್ ಹಾಗೂ ಸಚಿನ್ ಅಂಧೂರೆಗೆ ಪುನಲೇಕರ್ ಸಹವರ್ತಿ ಭಾವೆ ಸಹಕರಿಸಿದ್ದನೆಂದೂ ಸಿಬಿಐ ಹೇಳಿದೆ.
ಪುನಲೇಕರ್ ಮತ್ತು ಭಾವೆಯನ್ನು 14 ದಿನಗಳ ಕಸ್ಟಡಿಗೆ ವಹಿಸುವಂತೆ ಸಿಬಿಐ ಕೋರಿದರೂ ಜೂನ್ 1ರ ತನಕ ಅವರನ್ನು ಕಸ್ಟಡಿಗೆ ವಹಿಸಲು ನ್ಯಾಯಾಲಯ ಒಪ್ಪಿದೆ. ಇಲ್ಲಿಯ ತನಕ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ತಲುಪಿದೆ.
ಪುನಲೇಕರ್ ಸನಾತನ ಸಂಸ್ಥಾದ ಪ್ರಮುಖ ವ್ಯಕ್ತಿಯಾಗಿದ್ದು, ಸಂಸ್ಥೆಯನ್ನು ಸಮರ್ಥಿಸಿ ಟಿವಿ ಚರ್ಚಾ ಕೂಟಗಳಲ್ಲೂ ಭಾಗವಹಿಸುತ್ತಿದ್ದ. ವಿಕ್ರಮ್ ಭಾವೆ ಕೂಡ ಸನಾತನ ಸಂಸ್ಥಾ ಸದಸ್ಯನಾಗಿದ್ದು 2008ರ ಥಾಣೆ ಸ್ಫೋಟ ಪ್ರಕರಣದಲ್ಲಿ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. 2013ರಲ್ಲಿ ಬಾಂಬೆ ಹೈಕೋರ್ಟಿನ ಜಾಮೀನಿನ ಮೇಲೆ ಆತ ಬಿಡುಗಡೆಗೊಂಡಿದ್ದ.