‘ಗಾಂಧಿ-150’ ಕಾರ್ಯಕ್ರಮದಡಿ ಬಡ ದಲಿತ ಕುಟುಂಬಕ್ಕೆ ಮನೆ ನಿರ್ಮಾಣ

ಉಡುಪಿ, ಮೇ 27: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯು ಮಹಾತ್ಮ ಗಾಂಧೀಜಿ ಜನ್ಮ ಶತಾಬ್ದಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ‘ಗಾಂಧಿ-150’ ಕಾರ್ಯಕ್ರಮದಡಿ ಅಲೆವೂರು ಗ್ರಾಪಂ ವ್ಯಾಪ್ತಿಯ ಕೊರಂಗ್ರಪಾಡಿ ವಾರ್ಡ್ನ ಜನತಾ ಕಾಲನಿಯ ಬಡ, ಅಶಕ್ತ ಪರಿಶಿಷ್ಟ ಜಾತಿಯ ನಳಿನಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಗುದ್ದಲಿ ಪೂಜೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕೆಪಿಸಿಸಿ ಕಾರ್ಯದರ್ಶಿ ವರೋನಿಕಾ ಕರ್ನೆಲಿಯೋ, ಕಾಂಗ್ರೆಸ್ ಮಹಿಳಾ ನಾಯಕಿ ಸರಳ ಕಾಂಚನ್ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಳಿನಿ ಹಾಗೂ ಅವರ ಮಕ್ಕಳು ಮತ್ತು ಕುಟುಂಬಸ್ಥರು ಹಾಜರಿದ್ದರು.
ನಳಿನಿ ಕುಟುಂಬ ತೀರ ಬಡತನದ ಜೀವನ ನಡೆಸುತ್ತಿದ್ದು, ಇವರ ಪತಿ ಆರು ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ಸದ್ಯ ಇವರು ತನ್ನ ಮೂವರು ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಇವರಲ್ಲಿ ಓರ್ವ ಮಗ ಪ್ರಶಾಂತ್(34) ಹುಟ್ಟು ಅಂಗವಿಕಲನಾಗಿದ್ದು, ಕೂರಲೂ ಆಗದೆ, ನಿಲ್ಲಲೂ ಸಾಧ್ಯವಿಲ್ಲದೆ ಮಲಗಿದ ಸ್ಥಿತಿಯಲ್ಲೇ ಇದ್ದಾರೆ. ಉಳಿದ ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದಾರೆ.
‘ಸ್ಥಳೀಯ ಗ್ರಾಪಂ ಸದಸ್ಯೆ ಅಮೃತಾ ಉಮೇಶ್ ಕೋಟ್ಯಾನ್ ಅವರ ಶಿಫಾರಸ್ಸಿನ ಮೇರೆಗೆ ನಮ್ಮ ಕುಟುಂಬವನ್ನು ಆಯ್ಕೆ ಮಾಡಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಕಳೆದ 20 ವರ್ಷಗಳಿಂದ ಗುಡಿಸಲು ಮನೆಯಲ್ಲಿ ವಾಸ ಮಾಡಿ ಕೊಂಡಿದ್ದು, ಮಳೆಗಾಲದಲ್ಲಿ ನೀರು ಸೋರಿಕೆ ಮಧ್ಯೆಯೂ ದಿನ ಕಳೆದಿದ್ದೇವೆ. ಕಳೆದ ಮಳೆಗಾಲದಲ್ಲಿ ಮನೆ ಸಂಪೂರ್ಣ ಹಾನಿಯಾದ ಹಿನ್ನೆಲೆಯಲ್ಲಿ ಕೆಲಸ ಸಮಯದಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದೇವೆ’ ಎಂದು ನಳಿನಿ ತಿಳಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಡುಪಿ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಮಾತನಾಡಿ, ‘ಸಂಘಟನೆಗೆ ಜಿಲ್ಲೆಯಿಂದ ಒಟ್ಟು 8 ಅರ್ಜಿಗಳು ಬಂದಿದ್ದು, ಅದರಲ್ಲಿ ಎರಡು ಅರ್ಜಿಗಳನ್ನು ಅಂತಿಮ ಗೊಳಿಸಲಾಗಿದೆ. ಒಂದು ನಳಿನಿ ಕುಟುಂಬವಾದರೆ, ಇನ್ನೊಂದು ಕಾರ್ಕಳ ಕಾಂತಾವರದ ಮಾಲತಿ ಶೆಟ್ಟಿ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗುತ್ತದೆ’ ಎಂದರು.
ಇದು ಪ್ರಥಮ ಯೋಜನೆಯಾಗಿದ್ದು, ಎರಡನೆ ಹಂತದಲ್ಲಿ ಕಾಂತಾವರದ ಮನೆ ನಿರ್ಮಿಸಲಾಗುತ್ತದೆ. ಎರಡು ಮನೆಗಳನ್ನು ತಲಾ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಸರಕಾರದಿಂದ ನಳಿನಿ ಕುಟುಂಬಕ್ಕೆ ಮಂಜೂರಾದ 1.53 ಸೆಂಟ್ಸ್ ಜಾಗದಲ್ಲಿ ಈ ಮನೆ ನಿರ್ಮಿಸಲಾಗುತ್ತಿದೆ. ಮನೆಯ ಕಾಮಗಾರಿಯನ್ನು ಅಕ್ಟೋಬರ್ ತಿಂಗಳೊಳಗೆ ಪೂರ್ಣಗೊಳಿಸಿ ಅ.2ರ ಗಾಂಧಿ ಜಯಂತಿ ದಿನದಂದು ಹಸ್ತಾಂತರ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಹ ಸಂಯೋಜಕಿ ಮೇರಿ ಡಿಸೋಜ, ಪ್ರಮುಖರಾದ ಸೋಮನಾಥ ಬಿ.ಕೆ., ವೈ.ಬಿ.ರಾಘವೇಂದ್ರ, ಸೂರ್ಯ ಸಾಲ್ಯಾನ್, ಸತೀಶ್ ಜಪ್ತಿ, ಶಂಕರ್ ನಾಯ್ಕಿ, ಸುನೀಲ್ ಬಂಗೇರ, ನಝೀರ್, ಚಂದ್ರವತಿ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಹರೀಶ್ ಕಿಣಿ, ಕಿಶನ್ಹೆಗ್ಡೆ ಕೊಳ್ಕೆಬೈಲ್, ಡಾ.ಸುನೀತಾ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಗೀತಾ ವಾಗ್ಳೆ, ಗ್ರಾಪಂ ಸದಸ್ಯರಾದ ಅಮೃತಾ ಉಮೇಶ್ ಕೋಟ್ಯಾನ್, ಬಾಲಕೃಷ್ಣ ಶೆಟ್ಟಿ, ಸುಧಾಕರ ಪೂಜಾರಿ, ಸುರೇಶ್ ಬಂಗೇರ, ಆನಂದ ಕೊರಂಗ್ರಪಾಡಿ, ಗ್ರಾಪಂ ಉಪಾಧ್ಯಕ್ಷ ರಿಯಾಝ್ ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.







