ಚು.ಆಯೋಗ ವರ್ಗಾಯಿಸಿದ್ದ ಅಧಿಕಾರಿಗಳನ್ನು ಮರುನೇಮಿಸಿದ ಮಮತಾ ಬ್ಯಾನರ್ಜಿ
ಕೋಲ್ಕತಾ, ಮೇ 27: ಸಾರ್ವತ್ರಿಕ ಚುನಾವಣೆಯ ಸಂದರ್ಭ ಚುನಾವಣಾ ಆಯೋಗ ವರ್ಗಾಯಿಸಿದ್ದ ಪಶ್ಚಿಮ ಬಂಗಾಳದ 11 ಐಪಿಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮರು ನೇಮಿಸಿದ್ದಾರೆ. ಇದರಲ್ಲಿ ರಾಜ್ಯದ ಸಿಐಡಿ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದ ರಾಜೀವ್ ಕುಮಾರ್ ಕೂಡಾ ಸೇರಿದ್ದಾರೆ.
ರಾಜೀವ್ ಕುಮಾರ್ ಶಾರದಾ ಚಿಟ್ಫಂಡ್ ಹಗರಣದಲ್ಲಿ ಪುರಾವೆಗಳನ್ನು ನಾಶ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಬಾರಿಯ ಸಾರ್ವತ್ರಿಕ ಚುನಾವಣೆ ಸಂದರ್ಭ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡೆಸಿದ ರೋಡ್ ಶೋದಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಕುಮಾರ್ರನ್ನು ಚುನಾವಣಾ ಆಯೋಗ ವರ್ಗಾಯಿಸಿ ಕೋಲ್ಕತಾ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿತ್ತು. ಇದೀಗ ಈ ಹುದ್ದೆಗೆ ಅನುಜ್ ಶರ್ಮರನ್ನು ನೇಮಿಸಿರುವ ರಾಜ್ಯ ಸರಕಾರ, ಕುಮಾರ್ರನ್ನು ‘ನಿಯೋಜನೆಯ ಆದೇಶಕ್ಕೆ ಕಾಯುವಂತೆ’ ತಿಳಿಸಿ ವರ್ಗಾಯಿಸಿದೆ.
ಚುನಾವಣಾ ಆಯೋಗ ವರ್ಗಾಯಿಸಿದ್ದ ಅಧಿಕಾರಿಗಳಾದ ಅನುಜ್ ಶರ್ಮ (ಕೋಲ್ಕತಾ ಪೊಲೀಸ್ ಆಯುಕ್ತರ ಹುದ್ದೆಯಿಂದ ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ ಮತ್ತು ಐಜಿಪಿ(ನಿರ್ವಹಣೆ) ಹುದ್ದೆಗೆ), ನಟರಾಜನ್ ರಮೇಶ್ ಬಾಬು(ಬಿಧಾನಗರ ಪೊಲೀಸ್ ಆಯುಕ್ತ), ಗ್ಯಾನವಂತ ಸಿಂಗ್ (ಬಿಧಾನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ಆರ್ಥಿಕ ಅಪರಾಧ ಮಹಾನಿರ್ದೇಶನಾಲಯದ ನಿರ್ದೇಶಕ), ಸುನಿಲ್ ಕುಮಾರ್ ಚೌಧರಿ(ಬರಾಕ್ಪೋರ್ ಪೊಲೀಸ್ ಆಯುಕ್ತ), ಶ್ಯಾಂ ಸಿಂಗ್(ಬೀರ್ಭೂಮ್ನ ಪೊಲೀಸ್ ಅಧೀಕ್ಷಕ), ಅಮಿತ್ ಕುಮಾರ್ ಸಿಂಗ್ (ಕೂಚ್ಬೆಹಾರ್ ಜಿಲ್ಲೆಯ ಪೊಲೀಸ್ ಅಧೀಕ್ಷಕ), ದೇವೇಂದ್ರ ಪ್ರಕಾಶ್ ಸಿಂಗ್, ಅವ್ವರು ರವೀಂದ್ರನಾಥ್, ಅಭಿಷೇಕ್ ಗುಪ್ತರನ್ನು ಸರಕಾರ ಮರು ನೇಮಿಸಿದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.