ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಪಟ್ಟು
ತನ್ನ ಬದಲಿಗೆ ಬೇರೆಯವರನ್ನು ಹುಡುಕುವಂತೆ ಪಕ್ಷಕ್ಕೆ ಸೂಚನೆ

ಹೊಸದಿಲ್ಲಿ,ಮೇ 27: ಸೋಮವಾರ ಇಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್ ಮತ್ತು ಕೆ.ಸಿ.ವೇಣುಗೋಪಾಲ ಅವರೊಂದಿಗೆ ಮಾತುಕತೆ ನಡೆಸಿದ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು,ತಾನು ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಮತ್ತು ಪಕ್ಷವು ನೂತನ ಅಧ್ಯಕ್ಷರನ್ನು ಕಂಡುಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಪಕ್ಷದ ಅಧ್ಯಕ್ಷ ಹುದ್ದೆಯನ್ನು ತೊರೆಯುವ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಹೇಳಿದ್ದಾಗಿ ವರದಿಗಳು ತಿಳಿಸಿವೆ.
ತನಗಾಗಿ ಕಾಯುತ್ತಿದ್ದ ಪಕ್ಷದ ನೂತನ ಸಂಸದರನ್ನೂ ಭೇಟಿಯಾಗಲೂ ರಾಹುಲ್ ನಿರಾಕರಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಪಟ್ಟು ಹಿಡಿಸಿರುವ ಅವರು ತನ್ನೆಲ್ಲ ಭೇಟಿಗಳು ಮತ್ತು ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಶನಿವಾರ ಇಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯ ಕೊಡುಗೆಯನ್ನು ರಾಹುಲ್ ಮುಂದಿಟ್ಟಿದ್ದರಾದರೂ ಅದನ್ನು ಸರ್ವಾನುಮತದಿಂದ ತಿರಸ್ಕರಿಸಿದ್ದ ಸಮಿತಿ ಸದಸ್ಯರು,ಸವಾಲಿನ ಸ್ಥಿತಿಯಲ್ಲಿ ಹುದ್ದೆಯಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದರು.