ದೇಶದಲ್ಲಿ ಯಂತ್ರ ನಾಗರಿಕತೆ ಅತಿಯಾಗಿದೆ: ಪ್ರೊ.ಮಲ್ಲೇಪುರಂ ವೆಂಕಟೇಶ್
ಬೆಂಗಳೂರು, ಮೇ 27: ಭಾರತ ಸಮೃದ್ಧವಾಗಲು ಕೈಗಾರಿಕೆಗಳು ಬಲಿಷ್ಠವಾಗಬೇಕಿದ್ದು, ಗುಡಿ ಕೈಗಾರಿಕೆಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕಿದೆ. ಆದರೆ, ಇಂದು ದೇಶದಲ್ಲಿ ಯಂತ್ರ ನಾಗರಿಕತೆ ಅತಿಯಾಗಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಗಾಂಧೀ ಶಾಂತಿ ಪ್ರತಿಷ್ಠಾನದ ವತಿಯಿಂದ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿನ ಗಾಂಧೀ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಭವಿಷ್ಯದ ಭಾರತಕ್ಕೆ ಗಾಂಧೀ ವಿಷಯದ ಕುರಿತ ಉಪನ್ಯಾಸದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಪಂಚವಾರ್ಷಿಕ ಯೋಜನೆ ಜಾರಿಯಾದ ಬಳಿಕ ಎಲ್ಲೆಡೆ ಬೃಹತ್ ಕೈಗಾರಿಕೆಗಳು ಆರಂಭವಾದವು. ಇದೇ ಸಂದರ್ಭದಲ್ಲಿ ಗುಡಿ ಕೈಗಾರಿಕೆಗಳಿಗೆ ನೀಡಬೇಕಾದ ಪ್ರೋತ್ಸಾಹ, ಉತ್ತೇಜನ ಕಡಿಮೆಯಾಯಿತು. ಇದರಿಂದ ದೇಶದಾದ್ಯಂತ ಕಾರ್ಖಾನೆಗಳಲ್ಲಿ ಯಾಂತ್ರೀಕರಣ ವೃದ್ಧಿಗೊಂಡಿದೆ. ಇದರಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ ಎಂದರು.
ನೂರಾರು ಜನ ಮಾಡುತ್ತಿದ್ದಂತಹ ಕೆಲಸ ಇಂದು ಒಂದೆರಡು ಯಂತ್ರಗಳು ನಿರ್ವಹಿಸುತ್ತಿವೆ. ಮನುಷ್ಯರು ಯಂತ್ರಗಳಿಗೆ ದಾಸರಾಗಿದ್ದು, ಈಗ ಎಲ್ಲವೂ ಯಂತ್ರ ನಿರ್ಮಿತವಾಗುತ್ತಿವೆ. ಹೀಗಾಗಿ, ನಾವು ಯಂತ್ರ ಮಾನವರಾಗಿದ್ದೇವೆ. ಮುಂದಿನ ಭವಿಷ್ಯದಲ್ಲಿ ಗಾಂಧಿಯನ್ನು ಅನುಸರಿಸದಿದ್ದಲ್ಲಿ ಮನುಷ್ಯ ಬದುಕುವುದು ಕಷ್ಟವಾಗಬಹುದು ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಸಾಧನೆ ಮಾಡಲು ಸಾಧ್ಯವಿದೆ. ಆದರೆ, ನಮ್ಮಲ್ಲಿರುವ ದುರಾಸೆಗಳನ್ನು ಬಿಡಬೇಕು. ಗಾಂಧೀಯವರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಬೇಕು. ಅವರ ಜೀವನವನ್ನು ಓದಿಕೊಂಡು, ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ದೇವರು ಸತ್ಯವಲ್ಲ. ಸತ್ಯವೆ ದೇವರು ಎಂದು ತಿಳಿದಿದ್ದರು, ಸತ್ಯಕ್ಕಾಗಿ ಬದುಕುತ್ತಿದ್ದರು ಗಾಂಧಿ. ಇಂದಿನ ದಿನಗಳಲ್ಲಿ ಎಲ್ಲೆಡೆ ಅಸತ್ಯವೇ ಮುಂದೆ ಬರುತ್ತಿದ್ದು, ಸತ್ಯಕ್ಕೆ ಹಿನ್ನೆಡೆಯಾಗುತ್ತಿದೆ ಎಂದು ನುಡಿದರು.
ನಾವೆಲ್ಲ ವರ್ತಮಾನದಲ್ಲಿದ್ದೇವೆ. ಜಗತ್ತಿಗೆ ಎಲ್ಲರ ಕೊಡುಗೆ ಹಾಗೂ ಗುರುತರ ಜವಾಬ್ದಾರಿ ಇದೆ. ದೇಶದ ಕೆಲವು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಹಂತಕ್ಕೂ ತಲುಪಿದ್ದೇವೆ. ಹೀಗಾಗಿ, ಗಾಂಧೀಜಿಯ ಮಾರ್ಗದರ್ಶನದಲ್ಲಿ, ಅವರ ಆಶಯ, ತತ್ವಗಳನ್ನು ಆದರ್ಶವಾಗಿಸಿಕೊಂಡು ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಹತ್ತಾರು ಪುಸ್ತಕಗಳನ್ನು ಓದಿದಷ್ಟು ಜ್ಞಾನ ಉಪನ್ಯಾಸದಿಂದ ಸಿಗುತ್ತದೆ. ಒಳ್ಳೆಯ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಅದಕ್ಕಾಗಿ ಗಾಂಧಿ, ಅಂಬೇಡ್ಕರ್, ವಿವೇಕಾನಂದರಂತಹ ಆದರ್ಶಪುರುಷರ ಚಿಂತನೆಗಳು ಮುಖ್ಯ ಎಂದು ಹೇಳಿದರು.
ದೇಶದಲ್ಲಿ ಅಹಿಂಸಾತ್ಮಕ ಸಮಾಜ ನಿರ್ಮಾಣ ಮಾಡುವ ಕನಸು ಕಂಡವರು ಮಹಾತ್ಮ ಗಾಂಧೀಜಿ. ಅಲ್ಲದೆ, ಭಾರತವನ್ನು ಬಹುತ್ವದ ದೇಶವನ್ನಾಗಿಸಬೇಕು, ಅದನ್ನು ಕಾಪಾಡಿಕೊಳ್ಳಬೇಕು ಎಂದು ಶ್ರಮಿಸಿದ್ದರು. ರಾಜಕೀಯದಲ್ಲಿ ಅವರ ವಿಚಾರಗಳು, ಅವರ ಸಹಭಾಗಿತ್ವ ಇಲ್ಲದಿರುವುದು ದುರಂತ ಎಂದ ಅವರು, ಗಾಂಧಿ ಕಂಡ ಕನಸನ್ನು ಮುಂದಿನ ದಿನಗಳಲ್ಲಿ ಕಟ್ಟೊಣ. ಅದನ್ನು ಸಾಕಾರಗೊಳಿಸಲು ಅವರ ಚಿಂತನೆಗಳು, ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.







