ಆ್ಯಂಬುಲೆನ್ಸ್ ನಿರಾಕರಿಸಿದ ವೈದ್ಯರು: ಮಗನ ಮೃತದೇಹ ಹೊತ್ತೊಯ್ದ ತಾಯಿ

ಶಹಜಹಾನ್ಪುರ(ಉತ್ತರಪ್ರದೇಶ),ಮೇ 28: ಜಿಲ್ಲಾಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ 9ರ ಹರೆಯದ ಬಾಲಕನ ದೇಹವನ್ನು ಕೈಯ್ಯಲ್ಲಿ ಹಿಡಿದು ಮನೆಗೆ ಸಾಗಿಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಶಹಜಾನ್ಪುರದಲ್ಲಿ ನಡೆದಿದೆ.
‘‘ವಿಪರೀತ ಜ್ವರದಿಂದ ಬಳಲುತ್ತಿದ ಮಗನನ್ನು ಇಂದು ಬೆಳಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಬಾಲಕನನ್ನು ಬೇರೆ ಆಸ್ಪತ್ರೆಗೆ ದಾಖಿಸುವಂತೆ ವೈದ್ಯರು ನಮಗೆ ತಿಳಿಸಿದರು. ಬಾಲಕನನ್ನು ಕರೆದೊಯ್ಯಲು ನಮಗೆ ವಾಹನ ಒದಗಿಸುವಂತೆ ಅವರಲ್ಲಿ ಕೇಳಿಕೊಂಡೆವು. ನಮ್ಮ ಬೇಡಿಕೆಯನ್ನು ಅವರು ನಿರಾಕರಿಸಿದರು. ಮೂರು ಆ್ಯಂಬುಲೆನ್ಸ್ಗಳು ಆಸ್ಪತ್ರೆಯಲ್ಲಿ ಆವರಣದಲ್ಲಿ ನಿಂತಿದ್ದವು. ಹೀಗಿದ್ದರೂ ಆ್ಯಂಬುಲೆನ್ಸ್ ಒದಗಿಸಲು ಏಕೆ ನಿರಾಕರಿಸಿದರು ಎಂದು ಗೊತ್ತಿಲ್ಲ’’ ಎಂದು ಮೃತಪಟ್ಟ ಬಾಲಕನ ತಂದೆ ಹೇಳಿದ್ದಾರೆ.
ಖಾಸಗಿ ಕ್ಯಾಬ್ನಲ್ಲಿ ತೆರಳಲು ಕೈಯಲ್ಲಿ ಹಣವಿಲ್ಲದ ಕಾರಣ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಹೆತ್ತವರು ಹೊತ್ತುಕೊಂಡು ಮನೆಯತ್ತ ಹೊರಟರು. ಆದರೆ, ದಾರಿ ಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಆದರೆ, ವೈದ್ಯರು ದಂಪತಿಯ ಆರೋಪವನ್ನು ನಿರಾಕರಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತುರ್ತು ವೈದ್ಯಕೀಯ ಅಧಿಕಾರಿ ಅನುರಾಗ್ ಪರಾಶರ್,‘‘ಅಫ್ರೋಝ್ ಹೆಸರಿನ ಬಾಲಕನನ್ನು ರಾತ್ರಿ 8:10ಕ್ಕೆ ಆಸ್ಪತ್ರೆಗೆ ಕರೆ ತಂದಿದ್ದರು. ಬಾಲಕನ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಹೀಗಾಗಿ ನಾವು ವಿಶೇಷ ಚಿಕಿತ್ಸೆಗಾಗಿ ಲಕ್ನೋಗೆ ತೆರಳುವಂತೆ ನಿರ್ದೇಶನ ನೀಡಿದ್ದೆವು. ನಾವು ನಮ್ಮ ಇಷ್ಟಬಂದ ಸ್ಥಳಕ್ಕೆ ಕರೆದೊಯ್ಯುತ್ತೇವೆ ಎಂದು ಹೇಳಿದ ಅವರು ಬಾಲಕನನ್ನು ಕರೆದುಕೊಂಡು ಹೋಗಿದ್ದರು’’ ಎಂದರು.