2019ರ ಪ್ರತಿಷ್ಠಿತ ವಾನ್ ಪ್ರಶಸ್ತಿಗಳಿಗೆ ಪ್ರವೇಶ ಪಡೆದ ಏಕತಾ ಪ್ರತಿಮೆ

ಮುಂಬೈ,ಮೇ 28: ಗುಜರಾತ್ ನಲ್ಲಿರುವ ಏಕತಾ ಪ್ರತಿಮೆಯು ಪ್ರತಿಷ್ಠಿತ 2109ರ ವರ್ಲ್ಡ್ ‘ಆರ್ಕಿಟೆಕ್ಚರ್ ನ್ಯೂಸ್(ವಾನ್)’ ಪ್ರಶಸ್ತಿಗಳಿಗೆ ಪ್ರವೇಶ ಪಡೆದಿದೆ.
ಹಾಲಿ ಮತ್ತ್ತು ಭವಿಷ್ಯದ ಯೋಜನೆಗಳಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ವಿನ್ಯಾಸವನ್ನು ವಾನ್ ಪ್ರಶಸ್ತಿಗಳು ಬಿಂಬಿಸುತ್ತವೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈನಲ್ಲಿ ನಡೆಯುವ ಸಾಧ್ಯತೆಯಿದೆ.
ಇದು ಭಾರತದ ಇಂಜಿನಿಯರಿಂಗ್ ಕೌಶಲ್ಯ ಮತ್ತು ಯೋಜನೆ ನಿರ್ವಹಣೆಗೆ ಲಭಿಸಿರುವ ಅತ್ಯಂತ ಮಹತ್ವದ ಮತ್ತು ಅರ್ಹ ಮಾನ್ಯತೆಯಾಗಿದೆ ಎಂದು ವಿಶ್ವದ ಅತ್ಯಂತ ಎತ್ತರದ ಏಕತಾ ಪ್ರತಿಮೆಯನ್ನು ನಿರ್ಮಿಸಿರುವ ಲಾರ್ಸನ್ ಆ್ಯಂಡ್ ಟುಬ್ರೋದ ಸಿಇಒ ಹಾಗೂ ಎಂಡಿ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಹರ್ಷ ವ್ಯಕ್ತಪಡಿಸಿದರು.
ದಾಖಲೆಯ 33 ತಿಂಗಳ ಅವಧಿಯಲ್ಲಿ ನಿರ್ಮಾಣಗೊಂಡಿರುವ 182 ಮೀ.ಎತ್ತರದ ಏಕತಾ ಪ್ರತಿಮೆಯು ದೇಶದ ಸ್ವಾತಂತ್ಯ್ರ ಹೋರಾಟದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆ ಮತ್ತು ದೇಶದ ಏಕೀಕರಣದಲ್ಲಿ ಅವರ ಪಾತ್ರಕ್ಕಾಗಿ ತಲೆಯೆತ್ತಿರುವ ಭವ್ಯ ಸ್ಮಾರಕವಾಗಿದೆ.
ಪ್ರತಿಮೆಯ ನಿರ್ಮಾಣಕ್ಕಾಗಿ ಒಟ್ಟು 25,000 ಟನ್ ಉಕ್ಕು,210,000 ಟನ್ ಕಾಂಕ್ರೀಟ್ ಮತ್ತು 1,700 ಟನ್ ಕಂಚಿನ ಲೇಪನಗಳನ್ನು ಬಳಸಲಾಗಿದ್ದು,4,500ಕ್ಕೂ ಅಧಿಕ ವಿನ್ಯಾಸಕಾರರು,ವಾಸ್ತುಶಿಲ್ಪಿಗಳು,ಜಾಗತಿಕ ಸಲಹೆಕಾರರು,ಇಂಜಿನಿಯರ್ಗಳು ಮತ್ತು ಕಾರ್ಮಿಕರು ಶ್ರಮಿಸಿದ್ದಾರೆ.
ಬಾಹ್ಯಾಕಾಶದಿಂದ ಗೋಚರಿಸುವ,ಮಾನವ ನಿರ್ಮಿತ ಕೆಲವೇ ರಚನೆಗಳಲ್ಲೊಂದಾಗಿರುವ ಏಕತಾ ಪ್ರತಿಮೆಯು ನರ್ಮದಾ ಜಲಾಶಯದಿಂದ 3.2 ಕಿ.ಮೀ ದೂರದ ಸಾಧು ಬೇಟ್ ದ್ವೀಪದಲ್ಲಿ ಸ್ಥಿತಗೊಂಡಿದೆ. ಮಹಾರಾಷ್ಟ್ರದ ಖ್ಯಾತ ವಾಸ್ತುಶಿಲ್ಪಿ ರಾಮ ವಿ.ಸುತಾರ ಅವರು ಪ್ರತಿಮೆಯ ವಿನ್ಯಾಸವನ್ನು ರಚಿಸಿದ್ದರು.
ಪ್ರತಿಮೆಯ ಎದೆಭಾಗದಲ್ಲಿ,135 ಮೀ.ಎತ್ತರದಲ್ಲಿ ವೀಕ್ಷಣಾ ಗ್ಯಾಲರಿಯನ್ನು ನಿರ್ಮಿಸಲಾಗಿದ್ದು,ಇಲ್ಲಿಂದ ಏಕಕಾಲದಲ್ಲಿ 200 ಪ್ರವಾಸಿಗಳು ನರ್ಮದಾ ಜಲಾಶಯ ಮತ್ತು ಇತರ ಹೆಗ್ಗುರುತುಗಳ ವಿಹಂಗಮ ನೋಟವನ್ನು ಸವಿಯಬಹುದಾಗಿದೆ.
ಪ್ರತಿ ಗಂಟೆಗೆ 290 ಕಿ.ಮೀ.ಗಾಳಿಯ ವೇಗ ಮತ್ತು ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆವರೆಗಿನ ಭೂಕಂಪಗಳನ್ನು ತಡೆದುಕೊಳ್ಳುವಂತೆ ಏಕತಾ ಪ್ರತಿಮೆಯನ್ನು ನಿರ್ಮಿಸಲಾಗಿದೆ.